ಜ್ಞಾನವಾಪಿ ಮಸೀದಿಯಲ್ಲಿ ‘ಶಿವಲಿಂಗ’, ಸಂಸತ್ ಚುನಾವಣೆಗೆ ಗಿಮಿಕ್
ಲಖನೌ:ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ‘ಶಿವಲಿಂಗ’ ಇರಲಿಲ್ಲ. ಮುಂಬರುವ 2024ರ ಸಂಸತ್ ಚುನಾವಣೆ ಹಿನ್ನೆಲೆ ಭಾವನೆಗಳನ್ನು ಹುಟ್ಟುಹಾಕಲು ಅದರ ಬಗ್ಗೆ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಸಮಾಜ ವಾದಿ ಪಕ್ಷದ ಸಂಸದ ಶಫೀಕರ್ ರಹಮಾನ್ ಬಾರ್ಕ್ ಆರೋಪಿಸಿದ್ದಾರೆ.
ಇತಿಹಾಸಕ್ಕೆ ಹೋದರೆ ಅಲ್ಲಿ ‘ಶಿವಲಿಂಗ’ ಇರಲಿಲ್ಲ. ಜ್ಞಾನವಾಪಿ ಮಸೀದಿ ಯಲ್ಲಿ ಬೇರೇನೂ ಇರಲಿಲ್ಲ ಎಂದು ಸಂಭಾಲ್‌ನ ಸಂಸದ ತಿಳಿಸಿದರು.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು ಸಂಸದರು ಆಗಮಿಸಿದ್ದರು. ಅಯೋಧ್ಯೆಯಲ್ಲಿ ‘ರಾಮ ಮಂದಿರ ನಿರ್ಮಾಣವಾಗುತ್ತಿದ್ದರೂ, ಅಲ್ಲಿ ಮಸೀದಿ ಇದೆ ಎಂದು ನಾನು ಹೇಳುತ್ತೇನೆ’ ಎಂದು ಹೇಳಿದರು.
ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮಸೀದಿಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಸರ್ಕಾರ ಪ್ರಾಮಾಣಿಕತೆ ಮತ್ತು ಕಾನೂನು ಪಾಲನೆಯಿಂದ ನಡೆಯಬೇಕು. ಇಲ್ಲಿ ಬುಲ್ಡೋಜರ್ ನಿಯಮವಿದೆ, ಕಾನೂನಲ್ಲ ಎಂದು ಹೇಳಿದರು.