ಅತಿಸಾರ ಭೇದಿ: ಆರು ಸಾವು, 71 ಜನರು ಆಸ್ಪತ್ರೆಗೆ ದಾಖಲು
ರಾಯಗಡ: ಒಡಿಶಾದ ರಾಯಗಡ ಜಿಲ್ಲೆಯ ಗ್ರಾಮಗಳಲ್ಲಿ ಕಲುಷಿತ ನೀರನ್ನು ಸೇವಿಸಿ ಉಂಟಾದ ಅತಿಸಾರ ಭೇದಿಯಿಂದ ಕನಿಷ್ಠಆರು ಜನರು ಮೃತಪಟ್ಟು 71 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಧಾನಸಭೆಯಲ್ಲಿ ಈ ಘಟನೆ ಪ್ರತಿಧ್ವನಿಸಿ, ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಹೇಳಿಕೆಗೆ ಒತ್ತಾಯಿಸಿತು.
ಕಳೆದ ಮೂರು ದಿನಗಳಲ್ಲಿ ಕಾಶಿಪುರ ಬ್ಲಾಕ್‌ನ ವಿವಿಧ ಗ್ರಾಮಗಳಲ್ಲಿ ಸಾವುಗಳು ವರದಿ ಯಾಗಿವೆ. 11 ವೈದ್ಯರ ತಂಡ ತೊಂದರೆಗೀಡಾಗಿರುವ ಗ್ರಾಮಗಳಿಗೆ ಭೇಟಿ ನೀಡಿ ನೀರು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಕ್ಕೂ ಹೆಚ್ಚು ಗ್ರಾಮಗಳಲ್ಲಿ ಅನೇಕ ಮಂದಿ ಅತಿಸಾರದಿಂದ ಬಳಲು ತ್ತಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಕಲುಷಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾಗಿರುವ 71 ಜನರಲ್ಲಿ 46 ಜನರು ಟಿಕಿರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ, 14 ಜನರು ಕಾಶಿಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತು 11 ಬಾಲಕಿಯರು ತತೀಬಾರ್ ಪಿಎಚ್‌ಸಿಯ ಆಶ್ರಮ ಶಾಲೆ ಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಬ್ಬ ರೋಗಿಯ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟ ನಂತರ ಕೋರಾಪುಟ್‌ನ ಎಸ್‌ಎಲ್‌ಎನ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.