ಉತ್ತರಾಖಂಡ ಬಿಜೆಪಿ ಘಟಕಕ್ಕೆ ಮಹೇಂದ್ರ ಭಟ್ ಅಧ್ಯಕ್ಷರಾಗಿ ನೇಮಕ
ನವದೆಹಲಿ:ಮಹೇಂದ್ರ ಭಟ್ ಅವರನ್ನು ಪಕ್ಷದ ಉತ್ತರಾಖಂಡ ಘಟಕಕ್ಕೆ ಅಧ್ಯಕ್ಷರನ್ನಾಗಿ ಬಿಜೆಪಿ ಶನಿವಾರ ನೇಮಕ ಮಾಡಿದೆ.
ಈವರೆಗೆ ಹರಿದ್ವಾರದ ಶಾಸಕ ಮಹೇಶ್ ಕೌಶಿಕ್ ಅಧ್ಯಕ್ಷರಾಗಿದ್ದರು. ಈ ವರ್ಷ ಆರಂಭದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಹೇಂದ್ರ ಭಟ್ ಸೋಲನುಭವಿಸಿದ್ದರು.
ಗರ್ವಾಲ್ ಪ್ರದೇಶದ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಕೇಸರಿ ಪಕ್ಷವು ಜಾತಿ ಲೆಕ್ಕಾಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕುಮಾವಂ ಪ್ರದೇಶದ ಠಾಕೂರ್ ಸಮುದಾಯದವರಾಗಿದ್ದಾರೆ.
ಮಹೇಂದ್ರ ಭಟ್ ಅವರು ಬಿಜೆಪಿಯ ಯುವ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದಲೇ ಹಂತಹಂತವಾಗಿ ಪಕ್ಷ ದಲ್ಲಿ ಬೆಳೆದು ಬಂದಿದ್ದಾರೆ. ಆರ್‌ಎಸ್‌ಎಸ್ ಹಿನ್ನೆಲೆ ಹೊಂದಿದ್ದಾರೆ.
ಉತ್ತರಾಖಂಡ ಬಿಜೆಪಿಯು ಕಳೆದ ಕೆಲವು ವರ್ಷಗಳಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದೆ. ಧಾಮಿ ಅವರನ್ನು ಕೂಡ ಜಾತಿ ಲೆಕ್ಕಾಚಾರದಲ್ಲಿಯೇ ಮುಖ್ಯಮಂತ್ರಿಯಾಗಿ ಕೇಂದ್ರೀಯ ನಾಯಕತ್ವ ನೇಮಿಸಿತ್ತು ಎನ್ನಲಾಗಿದೆ.