ಅಪಹರಣ ಪ್ರಕರಣ: ರಾಜೀನಾಮೆ ನೀಡಿದ ನಿತೀಶ್‌ ಸಂಪುಟದ ಸಚಿವ
ಪಾಟ್ನಾ:ಅಪಹರಣ ಪ್ರಕರಣ(2014) ದಲ್ಲಿ ಆರೋಪ ಎದುರಿಸುತ್ತಿರುವ ಬಿಹಾರದ ಸಚಿವ ಕಾರ್ತಿಕ್ ಕುಮಾರ್, ವಿರೋಧ ಪಕ್ಷಗಳ ತೀವ್ರ ಒತ್ತಡದ ನಡುವೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದಲ್ಲಿ ಆರ್‌ಜೆಡಿ ಎಂಎಲ್‌ಸಿ ಕಾರ್ತಿಕ್ ಕುಮಾರ್ ಅವರು ಕಾನೂನು ಸಚಿವರಾಗಿದ್ದರು. ಕಬ್ಬು ಉದ್ಯಮ ಸಚಿವರಾಗಿ ಖಾತೆ ಬದಲಾಯಿಸಿದ್ದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ್ದಾರೆ.
ಸಚಿವರ ರಾಜೀನಾಮೆ ಪತ್ರವನ್ನು ಬಿಹಾರ ರಾಜ್ಯಪಾಲರು ಅಂಗೀಕರಿಸಿದ್ದಾರೆ. ಕಂದಾಯ ಸಚಿವ ಅಲೋಕ್ ಕುಮಾರ್ ಮೆಹ್ತಾ ಅವರಿಗೆ ಕಬ್ಬು ಉದ್ಯಮ ಸಚಿವಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿದೆ.
ಕಾರ್ತಿಕ್ ಕುಮಾರ್ ರಾಜೀನಾಮೆಯ ನಂತರ, ನಿತೀಶ್ ಕುಮಾರ್ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಹರಿಹಾಯ್ದಿದ್ದಾರೆ.