ನ್ಯಾಯಾಂಗದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿಸಬೇಕಿದೆ
ನವದೆಹಲಿ: ‘ದಾವೆ ಪ್ರಕ್ರಿಯೆಗಳನ್ನು ಸರಳೀಕರಿಸುವುದರ ಜತೆಗೆ ಅವುಗಳನ್ನು ನಾಗರಿಕ ಕೇಂದ್ರಿತಗೊಳಿಸಬೇಕಿದೆ. ಇದಕ್ಕಾಗಿ ನ್ಯಾಯಾಂಗದಲ್ಲಿ ಸಾಂಸ್ಥಿಕ ಸುಧಾರಣೆಗಳ ಜತೆಗೆ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಬೇಕಿದೆ’ ಎಂದು ಸುಪ್ರೀಂಕೋರ್ಟ್‌ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅಭಿಪ್ರಾಯಪಟ್ಟರು.
‘ಜನರು ನ್ಯಾಯಕ್ಕಾಗಿ ನ್ಯಾಯಾಲಯಗಳಿಗೆ ಎಡತಾಗುವುದರ ಬದಲಿಗೆ, ನ್ಯಾಯವು ನಾಗರಿಕರನ್ನು ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯ ವ್ಯವಸ್ಥೆಯನ್ನು ಮರು ರೂಪಿಸಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ಸುಪ್ರೀಂಕೋರ್ಟ್‌ನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಸಿಜೆಐ, ‘ದೇಶದಾದ್ಯಂತ ಇರುವ ನ್ಯಾಯಾಧೀಶರು ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯ ಪಡೆಯುವ ಸಾಂವಿಧಾನಿಕ ದೃಷ್ಟಿಕೋನವನ್ನು ಪ್ರತಿಬಂಬಿಸಬೇಕು’ ಎಂದು ಸೂಚಿಸಿ ದರು.
‘ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯಗಳು ಮತ್ತು ಮಹಿಳೆಯ ಪ್ರಾತಿನಿಧ್ಯವನ್ನು ವಕೀಲ ವೃತ್ತಿ ಮತ್ತು ನ್ಯಾಯಾಂಗದಲ್ಲಿ ಹೆಚ್ಚಿಸಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ವರ್ಚುವಲ್‌ ‘ಜಸ್ಟೀಸ್‌ ಕ್ಲಾಕ್‌’, ‘ಜಸ್ಟೀಸ್‌ ಮೊಬೈಲ್‌ ಅಪ್ಲಿಕೇ ಷನ್‌ 2.0’, ‘ಡಿಜಿಟಲ್‌ ಕೋರ್ಟ್‌’ ಮತ್ತು ಜಿಲ್ಲಾ ನ್ಯಾಯಾಲಯಗಳ ‘ಎಸ್‌3ವಾಸ್‌ ವೆಬ್‌ಸೈಟ್‌ಗಳ’ ಕುರಿತು ಸಿಜೆಐ ಮಾತನಾಡಿ ದರು.
ಪ್ರಸ್ತುತ ಸುಪ್ರೀಂಕೋರ್ಟ್‌ ಹೈಬ್ರಿಡ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ದೇಶದ ವಿವಿಧ ಭಾಗಗಳ ವಕೀಲರು ಮತ್ತು ಕಕ್ಷಿದಾರರಿಗೆ ವೈಯಕ್ತಿಕವಾಗಿ ಹಾಜರಾಗಲು ಅವಕಾಶ ದೊರೆಯುತ್ತಿದೆ ಎಂದು ಸಿಜೆಐ ತಿಳಿಸಿದರು.
‘ಜಸ್ಟಿಸ್ ಮೊಬೈಲ್ ಅಪ್ಲಿಕೇಷನ್ 2.0’ ಅನ್ನು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ನ್ಯಾಯಾಲಯಗಳಲ್ಲಿನ ಬಾಕಿ ಇರುವ ಮತ್ತು ವಿಲೇವಾರಿಯಾದ ಪ್ರಕರಣಗಳ ಕುರಿತು ನ್ಯಾಯಾಂಗದ ಅಧಿಕಾರಿಗಳಿಗೆ ಮಾಹಿತಿ ಒದಗಿಸುತ್ತದೆ ಎಂದು ಅವರು ತಿಳಿಸಿದರು.
ನ್ಯಾಯಾಲಯಗಳನ್ನು ಕಾಗದ ರಹಿತಗೊಳಿಸುವ ಉದ್ದೇಶವನ್ನು ‘ಡಿಜಿಟಲ್‌ ಕೋರ್ಟ್‌’ ಹೊಂದಿದೆ ಎಂದು ಹೇಳಿದರು.