ಅಮಿತ್ ಶಾಗೆ ಕ್ರೀಡಾ ಸಚಿವಾಲಯ ನೀಡಿ: ಸುಬ್ರಮಣಿಯನ್ ಟೀಕೆ
ನವದೆಹಲಿ:ಮಣಿಪುರ ಹಿಂಸಾಚಾರ ಕುರಿತಂತೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಕೇಂದ್ರ ಗೃಹ ಸಚಿವಅಮಿತ್‌ ಶಾ ಅವರನ್ನು ಟೀಕಿಸಿದ್ದು, ಅವರನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಬೇಕು ಎಂದು ಹೇಳಿದ್ದಾರೆ.
ಮಣಿಪುರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಮಣಿಪುರದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ, ಸಂವಿಧಾನದ 356 ನೇ ವಿಧಿಯ ಅಡಿಯಲ್ಲಿ ಕೇಂದ್ರದ ಆಡಳಿತವನ್ನು ರಾಜ್ಯದಲ್ಲಿ ಹೇರುವ ಸಮಯ ಬಂದಿದೆ ಎಂದು ಟ್ವೀಟ್‌ ಮಾಡಿದ್ದಾರೆ.
ಅಮಿತ್‌ ಶಾ ಅಸಮರ್ಥತೆಯನ್ನೂ ಬೊಟ್ಟು ಮಾಡಿದ ಸ್ವಾಮಿ, ಶಾರನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಬೇಕು ಎಂದಿದ್ದಾರೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಮಣಿಪುರದಲ್ಲಿ ಆರಂಭವಾದ ಮೈತೇಯ್ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಹಿಂಸಾ ಚಾರವನ್ನು ಮಟ್ಟ ಹಾಕಲು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಹಿಂಸಾಚಾರದಿಂದಾಗಿ ಇದುವರೆಗೆ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮಣಿಪುರದಲ್ಲಿ ಕೇಂದ್ರ ಸಚಿವ ಆರ್.ಕೆ.ರಂಜನ್ ಸಿಂಗ್ ಅವರ ಮನೆಗೆ ನುಗ್ಗಿ ಬೆಂಕಿ ಹಚ್ಚಲಾಗಿದ್ದು, ರಾಜಭವನದ ಬಳಿ ಇರುವ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಗೋಡೌನ್ ಗೆ ಬೆಂಕಿ ಹಚ್ಚಲಾಗಿದೆ.
ಸದ್ಯ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.