ನಿರ್ಮಾಣ ಹಂತದ ಸೇತುವೆ ಕುಸಿದು ಕಾರ್ಮಿಕ ಸಾವು
ಕಟ್ನಿ (ಮಧ್ಯಪ್ರದೇಶ):ಕಟ್ನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಖೋಹ್ರಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಘಟನೆ ಸಂಭವಿಸಿದ್ದು, ಸೇತುವೆಯ ನಿರ್ಮಾಣವು ಬಹಳ ಸಮಯದಿಂದ ನಡೆಯುತ್ತಿದೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡವು ಸ್ಥಳಕ್ಕೆ ಧಾವಿಸಿದ್ದು, ರಿತಿ ಪೊಲೀಸ್ ತಂಡದ ಸಹಕಾರದೊಂದಿಗೆ ಕಾರ್ಮಿಕನನ್ನು ರಕ್ಷಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಂತರ ತಂಡವು ಅವಶೇಷಗಳಿಂದ ಮೃತದೇಹ ವನ್ನು ಹೊರ ತೆಗೆದಿದೆ.
ಮೃತ ಕಾರ್ಮಿಕನನ್ನು ನೀರಜ್ ಚೌಧರಿ (22) ಎಂದು ಗುರುತಿಸಲಾಗಿದೆ.
ನಾಯಬ್ ತಹಸೀಲ್ದಾರ್ ರಾಜೀವ್ ಮಿಶ್ರಾ ಮಾತನಾಡಿ, ಸೇತುವೆ ನಿರ್ಮಾಣ ಕಾರ್ಯದಲ್ಲಿ ಸುಮಾರು ಆರು ಮಂದಿ ಕೆಲಸ ಮಾಡುತ್ತಿದ್ದು, ಗುರುವಾರ ಸಂಜೆ ಸೇತುವೆ ಹಠಾತ್ ಕುಸಿದು ಬಿದ್ದಿದ್ದು, ನೀರಜ್ ಚೌಧರಿ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ.