ಸ್ಥಳೀಯ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟಿಸುವ ಬೆದರಿಕೆ: ಓರ್ವನ ಬಂಧನ
ಮುಂಬೈ:ಗೃಹ ಸಚಿವ ಅಮಿತ್​ ಶಾ ಅವರು ಮುಂಬೈ ಭೇಟಿ ನೀಡಿದ ಬೆನ್ನಲ್ಲೇ ಸ್ಥಳೀಯ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ.
ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು, ಓರ್ವನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅಶೋಕ್​ ಮುಖಿಯಾ ಎಂದು ಗುರುತಿಸಲಾಗಿದೆ.
ಆರೋಪಿ ಮುಂಬೈ ಪೊಲೀಸ್​ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಲೋಕಲ್​ ಟ್ರೈನ್​ಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದ. ಪೊಲೀಸರು ಯಾವ ರೈಲು, ಸ್ಥಳ ಎಂಬ ಬಗ್ಗೆ ಮಾಹಿತಿ ಕೇಳಿದಾಗ, ಕಾಲ್ ಕಟ್​ ಮಾಡಿದ್ದ. ಬಳಿಕ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದ.
ಆರೋಪಿಯ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಯಿತು.
ಫೋನ್​ ಕರೆ ಬಂದ ಮಾಹಿತಿ ಆಧಾರದ ಅನ್ವಯ ಕಾಲ್​ ಟ್ರ್ಯಾಕ್​ ಮಾಡಿ ಆರೋಪಿ ಮುಖಿಯಾ ಎಂಬಾತನನ್ನು ಬಂಧಿಸಿದ್ದಾರೆ.
