ಜಾನಪದ ಗಾಯಕ, ಹೋರಾಟಗಾರ ಗದ್ದರ್ ನಿಧನ
ಗದ್ದರ್ ಎಂದೇ ಖ್ಯಾತ ಪಡೆದಿದ್ದ ಕ್ರಾಂತಿಕಾರಿ ಗಾಯಕ 77 ವರ್ಷದ ಗುಮ್ಮಡಿ ವಿಠಲ್ ರಾವ್ ಅವರು ಕಳೆದ ಕೆಲವು ದಿನಗಳಿಂದ ಶ್ವಾಸಕೋಶ ಮತ್ತು ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.​ತೀವ್ರ ಹೃದ್ರೋಗದಿಂದ ಬಳಲುತ್ತಿದ್ದ ಅವರು ಜುಲೈ 20 ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ಆಗಸ್ಟ್ 3 ರಂದು ಅವರಿಗೆ ಬೈಪಾಸ್ ಸರ್ಜರಿ ಮಾಡಲಾಗಿತ್ತು ಮತ್ತು ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿತ್ತು. ಅವರು ಶ್ವಾಸಕೋಶ ಮತ್ತು ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.
1948 ರಲ್ಲಿ ಜನಿಸಿದ ಗುಮ್ಮಡಿ ವಿಠ್ಠಲ್ ರಾವ್ ಅವರು, 2010 ರವರೆಗೆ ನಕ್ಸಲೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ನಂತರ ಅವರು ತೆಲಂಗಾಣ ಚಳವಳಿಗೆ ಸೇರ್ಪಡೆಗೊಂಡರು. ತೆಲಂಗಾಣದಲ್ಲಿ ಹಿಂದುಳಿದ ಜಾತಿಗಳು ಮತ್ತು ದಲಿತರ ಹಕ್ಕುಗಳಿಗಾಗಿ ಗದ್ದರ್ ಹೋರಾಟ ಮಾಡಿದ್ದರು.