ಕಲಾವಿದ ಚಿಂತನ್‌ ಉಪಾಧ್ಯಾಯರಿಗೆ ಜೀವಾವಧಿ ಶಿಕ್ಷೆ
ಮುಂಬೈ:ಅವಳಿ ಕೊಲೆ ಸಂಚು ಆರೋಪ ಎದುರಿಸುತ್ತಿದ್ದ ಕಲಾವಿದ ಚಿಂತನ್‌ ಉಪಾಧ್ಯಾಯ ಅಪರಾಧಿ ಎಂದು ಪರಿಗಣಿಸಿದ ಮುಂಬೈನ ದಿಂಡೋಶಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಚಿಂತನ್, ಪತ್ನಿ ಹಾಗೂ ಆಕೆಯ ವಕೀಲರನ್ನು ಕೊಲ್ಲಲು ಕುಮ್ಮಕ್ಕು ನೀಡಿದ ಮತ್ತು ಸಂಚು ರೂಪಿಸಿದ ಪ್ರಕರಣ ದಲ್ಲಿ ತಪ್ಪಿತಸ್ಥ ಎಂದು ಅಕ್ಟೋಬರ್ 5 ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ವೈ ಭೋಸಲೆ ತೀರ್ಪು ನೀಡಿದ್ದರು.
2015ರ ಡಿ.11 ರಂದು ಚಿಂತನ್‌ ಪತ್ನಿ ಹೇಮಾ ಮತ್ತು ಅವರ ವಕೀಲ ಹರೀಶ್‌ ಭಂಭಾನಿ ಕೊಲೆಯಾಗಿತ್ತು. ಮೃತದೇಹಗಳು ಪೆಟ್ಟಿಗೆಯೊಂದರಲ್ಲಿ ಮುಂಬೈನ ಖಂಡಿವಾಲಿ ಪ್ರದೇಶದಲ್ಲಿ ಹಳ್ಳವೊಂದರಲ್ಲಿ ಪತ್ತೆಯಾಗಿ ದ್ದವು.
ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಮೂವರನ್ನೂ ಅಪರಾಧಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿದೆ. ಚಿಂತನ್‌ ಉಪಾಧ್ಯಾಯ ವರ್ಣಚಿತ್ರ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.