ಪಂಚಕುಲ ಜಿಲ್ಲೆಯಲ್ಲಿ ಶಾಲಾ ಬಸ್ ಪಲ್ಟಿ: 40 ಮಂದಿಗೆ ಗಾಯ
ನವದೆಹಲಿ:ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಸೋಮವಾರ ಶಾಲಾ ಬಸ್ ಒಂದು ಪಲ್ಟಿಯಾದ ಪರಿಣಾಮ ಹಲವಾರು ಶಾಲಾ ಮಕ್ಕಳು ಸೇರಿ ಕನಿಷ್ಠ 40 ಜನರು ಗಾಯಗೊಂಡಿದ್ದಾರೆ. ಪಿಂಜೋರ್ ಪಟ್ಟಣದ ನೌಲತಾ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ.
ಬಸ್ ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪಂಚಕುಲದ ಪಿಂಜೋರ್ ಆಸ್ಪತ್ರೆ ಮತ್ತು ಸೆಕ್ಟರ್ 6 ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಬಸ್ ಚಾಲಕನ ಅತಿಯಾದ ವೇಗದಿಂದಾಗಿ ಅಪಘಾತ ಸಂಭವಿಸಿದೆ. ಇದರೊಂದಿಗೆ, ಬಸ್ ತನ್ನ ಸಾಮರ್ಥ್ಯವನ್ನು ಮೀರಿ ಪ್ರಯಾಣಿಕರಿಂದ ತುಂಬಿಕೊಂಡಿತ್ತು ಎನ್ನಲಾಗಿದೆ. ಓವರ್​ಲೋಡ್ ಮತ್ತು ಕಳಪೆ ರಸ್ತೆ ಪರಿಸ್ಥಿತಿಗಳು ಸಹ ಅಪಘಾತಕ್ಕೆ ಹೆಚ್ಚುವರಿ ಕಾರಣಗಳಾಗಿವೆ ಎಂದು ವರದಿ ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಗಂಭೀರ ಗಾಯಗೊಂಡ ಮಹಿಳೆಯರೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐ ಚಂಡೀಗಢಕ್ಕೆ ಕಳುಹಿಸಲಾಗಿದೆ. ಬಸ್ ಚಾಲಕನ ಅತಿಯಾದ ವೇಗದಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಪೊಲೀಸ್ ವರದಿಗಳು ಸೂಚಿಸುತ್ತವೆ.
ಪಂಚಕುಲದ ಕಲ್ಕಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಚೌಧರಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.