ಬಿಜೆಪಿ ನಾಯಕ, ರಾಜ್ಯಸಭೆ ಮಾಜಿ ಸದಸ್ಯ ಕೈಲಾಶ್ ನಾರಾಯಣ್ ಸಾರಂಗ್ ನಿಧನ
ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ನಾಯಕ, ರಾಜ್ಯಸಭೆ ಮಾಜಿ ಸದಸ್ಯ ಕೈಲಾಶ್ ನಾರಾಯಣ್ ಸಾರಂಗ್ (86) ಶನಿವಾರ ವಿಧಿವಶರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೈಲಾಶ್ ಸಾರಂಗ್ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ಸಾರಂಗ್ ಅವರು ಮಾಜಿ ಸಚಿವ ಹಾಗೂ ನರೇಲಾ ಶಾಸಕ ವಿಶ್ವಾಸ್ ಸಾರಂಗ್ ಅವರ ತಂದೆ. ತಮ್ಮ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಕೈಲಾಶ್ ಅಗಲಿದ್ದಾರೆ.
ಕೈಲಾಶ್ ಸಾಂರಗ್ ಅವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿ, ಶ್ರೀ ಕೈಲಾಶ್ ಸಾರಂಗ್ ಅವರು ಮಧ್ಯಪ್ರದೇಶದಾದ್ಯಂತ ಬಿಜೆಪಿ ಪಕ್ಷ ಬಲಪಡಿಸಲು ಸಾಕಷ್ಟು ಶ್ರಮ ಪಟ್ಟಿದ್ದರು. ಅವರ ನಿಧನದಿಂದ ಸಾಕಷ್ಟು ನೋವಾಗಿದ್ದು, ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.