ಕೋವಿಡ್‌ ಹೆಸರಿನಲ್ಲಿ ವಂಚನೆಗೆ ಒಳಗಾಗದಿರಿ: ಸರ್ಕಾರದ ಎಚ್ಚರಿಕೆ ನವದೆಹಲಿ: ಕೋವಿಡ್‌ ಹೆಸರಿನಲ್ಲಿ ಭಾರಿ ಪ್ರಮಾಣದಲ್ಲಿ ಸೈಬರ್‌ ದಾಳಿ ನಡೆಸಿ ವೈಯಕ್ತಿಕ ಮತ್ತು ಹಣಕಾಸಿಗೆ ಸಂಬಂಧಿಸಿದ ಮಾಹಿತಿಗಳನ್ನು ಕದಿಯುವ ಸಾಧ್ಯತೆ ಇದೆ ಎಂದು ಕೇಂ‌ದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಸರ್ಕಾರಿ ಸಂಸ್ಥೆಗಳು, ಇಲಾಖೆಗಳು ಮತ್ತು ವಾಣಿಜ್ಯ ಸಂಘಗಳೂ ಸೈಬರ್‌ ದಾಳಿಗೆ ತುತ್ತಾಗುವ ಸಾಧ್ಯತೆ ಇದ್ದು, ಕೋವಿಡ್‌ ಪರಿಹಾರ ನಿಧಿಗೆ ನೆರವು ನೀಡುವಾಗ ಎಚ್ಚರಿಕೆ ವಹಿಸುವಂತೆದೇಶದ ಸೈಬರ್‌ ಸುರಕ್ಷತಾ ಸಂಸ್ಥೆಯಾದ ಭಾರತೀಯ ಕಂಪ್ಯೂಟರ್‌ ತುರ್ತುಸ್ಥಿತಿ ಪ್ರತಿಕ್ರಿಯಾ ತಂಡ (ಸಿಇಆರ್‌ಟಿ–ಇನ್‌) ಸೂಚನೆ ನೀಡಿದೆ. ಭಾನುವಾರದಿಂದ ಫಿಶಿಂಗ್‌ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದ್ದು, ದಾಳಿಕೋರರು ncov2019@. ಎನ್ನುವ ಇ–ಮೇಲ್‌ ವಿಳಾಸದಲ್ಲಿ ವಂಚನೆಗೆ ಮುಂದಾಗಲಿದ್ದಾರೆ ಎಂದು ತಿಳಿಸಿದೆ. ಕೋವಿಡ್‌ ವಿರುದ್ಧದ ಹೋರಾಟಕ್ಕೆ ನೆರವಾಗುವ ಸರ್ಕಾರದ ನಿಧಿಗಳಿಗೆ ಹಣ ಕಳುಹಿಸುವಂತೆಸ್ಥಳೀಯ ಆಡಳಿತಗಳ ಹೆಸರಿನಲ್ಲಿ ವಂಚಕ ಇ–ಮೇಲ್‌ಗಳು ಬರಬಹುದು. ಅದರ ಮೂಲಕ ನಕಲಿ ಜಾಲತಾಣಕ್ಕೆ ಕರೆದೊಯ್ದು ಅಲ್ಲಿ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಗಳನ್ನು ಪಡೆದು ವಂಚಿಸುವ ಸಾಧ್ಯತೆ ಇದೆ. ದೆಹಲಿ, ಮುಂಬೈ, ಹೈದರಾಬಾದ್‌, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ಉಚಿತವಾಗಿ ಕೋವಿಡ್‌–19 ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ನಿಮ್ಮ ವೈಯಕ್ತಿಕ ಮಾಹಿತಿ ನೀಡಿ ಎಂದು 20 ಲಕ್ಷ ಜನರ ಇ–ಮೇಲ್‌ಗೆ ಸಂದೇಶ ರವಾನಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ದಾಳಿಕೋರರು ವಿವಿಧ ಸ್ಥಳೀಯ ಆಡಳಿತಗಳ ನಕಲಿ ಇ–ಮೇಲ್‌ ವಿಳಾಸಗಳನ್ನು ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಹೇಳಿದೆ. ಸುರಕ್ಷತಾ ಸಲಹೆಗಳು ಅನಾಮಧೇಯ ಇ–ಮೆಲ್‌ಗಳಲ್ಲಿ ಬರುವ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯದಿರಿ ಅತ್ಯಂತ ಸೂಕ್ಷ್ಮ ದಾಖಲೆಪತ್ರಗಳನ್ನು ಎನ್‌ಕ್ರಿಪ್ಟ್‌ ಮಾಡಿ ಆ್ಯಂಟಿ ವೈರಸ್‌, ಫೈರ್‌ವಾಲ್‌ ಬಳಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.