ಈ ಸರ್ಕಾರಿ ಶಾಲೆಗೆ 115 ವರ್ಷ ಶಿಕ್ಷಣವೇ ಶಕ್ತಿ ಎಂಬ ಗಾದೆ ಮಾತು ತುಂಬಾನೇ ಸತ್ಯ. ಏಕೆಂದರೆ ಅರಿವಿದ್ದರೆ ಮನುಷ್ಯ ಎಲ್ಲಿ ಬೇಕಾದರೂ ಬದುಕಬಹುದು ಎಂಬ ಧೈರ್ಯ ಕಂಡಿರುವುದು ನಿಜ. ಹೀಗಿರುವಾಗ ವಿದ್ಯಾಕಾಶಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದರಲ್ಲಿ ಮುಂದಿದೆ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಐಐಟಿ ಹೀಗೆ ಹಲವಾರು ಬಗೆಯ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ತವರೂರಾಗಿದೆ. ಅದರಂತೆ ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ 115 ವರ್ಷ ತುಂಬಿದ್ದು ಮಾದರಿ ಶಾಲೆಯೆನಿಸಿದೆ. 1904ರ ಮಾರ್ಚ್ 14ರಂದು ಆರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 115 ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ತಾಲ್ಲೂಕಿನಲ್ಲಿ ಮಾದರಿ ಶಾಲೆಯಾಗಿ ಹೆಸರು ಗಳಿಸಿದೆ. ಇಂಥ ಶಾಲೆ ಹೇಗೆಲ್ಲ ಬೆಳೆದು ಬಂದಿತು ಎಂಬುದನ್ನು ಒಮ್ಮೆ ಹೊರಳಿ ನೋಡೋಣ. ಮೊದಲು ಶಿಕ್ಷಣ ನೀಡುವಲ್ಲಿ ಗ್ರಾಮದ ಬಸವಣ್ಣನ ಗುಡಿಯೇ ವಿದ್ಯಾರ್ಥಿಗಳ ವಿದ್ಯಾ ಮಂದಿರವಾಗಿತ್ತು. 1970ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಬಡ್ತಿ ಹೊಂದಿತು. ಊರಿನಲ್ಲಿ ಶೈಕ್ಷಣಿಕ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯವಿರುವುದು. ಆರಂಭದಲ್ಲಿ ಒಬ್ಬ ಶಿಕ್ಷಕರು 23 ಮಕ್ಕಳಿಂದ ಪ್ರಾರಂಭವಾಗಿ, ಇಂದು ಸರಿ ಸುಮಾರು ಒಟ್ಟು 278 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲ ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣ ಕೇಂದ್ರವಾಗಿದೆ. ಹೀಗೆ ಬೆಳೆಯುತ್ತಾ, ಬೆಳಗುತ್ತಾ ಏಳು ಶಿಕ್ಷಕರ ಸೇವೆಯೊಂದಿಗೆ ಹಲವಾರು ಏಳು-ಬೀಳಿನ ನಡುವೆಯೂ ಮುಂದೆ ಸಾಗುತ್ತಿದೆ. ಮಾದರಿಯಾಗಿ ಗುರುತಿಸಿಕೊಂಡಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಶಾಲೆ ಸುತ್ತಮುತ್ತಲಿನ ಗ್ರಾಮಕ್ಕೆ ಮಾದರಿ ಶಾಲೆ ಎಂದು ಪರಿಗಣಿಸಲ್ಪಟ್ಟಿದೆ. ಕನ್ನಡದಿಂದ ಇಂಗ್ಲಿಷ್‌ ವ್ಯಾಮೋಹಕ್ಕೆ ಮುಗಿ ಬೀಳುತ್ತಿರುವ ನಡುವೆ ಅದಕ್ಕೆ ವಿರುದ್ಧವಾಗಿ ಉತ್ತಮ ಶಿಕ್ಷಣ ನೀಡುತ್ತಿದೆ. ಇಂದು ಕೂಡ ಹೆಣ್ಮಕ್ಕಳೇ ಹೆಚ್ಚು... ಒಂದು ಕಾಲದಲ್ಲಿ ಹೆಣ್ಣು ಎಂದರೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಇಂದು ಬದಲಾವಣೆ ಜಗದ ನಿಯಮ ಎಂಬಂತೆ ಹೆಣ್ಣು ಒಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಪ್ರೋತ್ಸಾಹಿಸುವಲ್ಲಿ ಈ ಶಾಲೆ ಪಾತ್ರ ವಹಿಸಿದೆ. ಸದ್ಯ 127 ಗಂಡು, 151 ಹೆಣ್ಣು ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಸಂತಸದ ಸಂಗತಿ ಎನ್ನುತ್ತಾರೆ ಗ್ರಾಮಸ್ಥರು. ಶತಮಾನ ಕಂಡ ಶಾಲೆಗೆ ಜನಪ್ರತಿನಿಧಿಗಳ ಸೇವಾ ಕಾಳಜಿ, ಗ್ರಾಮದ ಶಿಕ್ಷಣ ಪ್ರೇಮಿಗಳ ಸಹಕಾರ, ಹಳೆ ವಿದ್ಯಾರ್ಥಿಗಳ ಪ್ರೋತ್ಸಾಹ, ಶಿಕ್ಷಕರ ಜವಾಬ್ದಾರಿ, ಅಧಿಕಾರಿಗಳ ಬೆಂಬಲ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಶಾಲೆಗೆ ಸುಸಜ್ಜಿತ ಕೊಠಡಿಗಳ ನಿರ್ಮಾಣ, ಅಧ್ಯಯನಕ್ಕೆ ಬೇಕಾದ ಗಣಕಯಂತ್ರ, ಆನ್‌ಲೈನ್ ಶಿಕ್ಷಣ, ಪ್ರಯೋಗಾಲಯ, ಗ್ರಂಥಾಲಯ ಆಟದ ಮೈದಾನ, ವಿದ್ಯುತ್ ಸೌಲಭ್ಯ, ಮಕ್ಕಳ ಸಂಖ್ಯೆಗನುಗುಣವಾಗಿ ಶೌಚಾಲಯ ಮುಂತಾದ ಸೌಲಭ್ಯಗಳು ಅವಶ್ಯಕತೆ ಇದೆ ಎಂದು ಶಾಲೆಯ ಹೆಚ್ಚುವರಿ ಮುಖ್ಯ ಶಿಕ್ಷಕ ಸುರೇಶ ರೆಡ್ಡಿ ತಿಳಿಸಿದರು. ‘ಶತಮಾನ ಕಂಡಿರುವ ನಮ್ಮೂರ ಶಾಲೆ ಚಲೋ ಐತಿ, ಈಗಾಗಲೇ ನಮ್ಮ ಊರಿನ ಸುತ್ತಮುತ್ತ ಹಳ್ಳಿಗಳಿಗೆ ಮಾದರಿ ಶಾಲೆಯಾಗಿದೆ. ಆದಾಗ್ಯೂ ಸಂಬಂಧಪಟ್ಟ ಸಚಿವರು ಹೊಸ ಸೌಲಭ್ಯ ನೀಡಲು ಮುಂದಾಗಲಿ’ ಎನ್ನುತ್ತಾರೆ ಗ್ರಾಮದ ಶಂಕರಪ್ಪ ಕುಂಬಾರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.