ಉದ್ಯೋಗವಕಾಶ: ಆರ್ಥಿಕ ಇಲಾಖೆಯಲ್ಲಿ ಗಣತಿದಾರರು, ಡಿಒಇ ಹುದ್ದೆಗಳು– ಸಂಪೂರ್ಣ ವಿವರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಉದ್ಯೋಗಾಂಕ್ಷಿಗಳಿಗೆ ಮತ್ತೊಂದು ಹೊಸ ಅವಕಾಶವನ್ನು ಹೊತ್ತು ತಂದಿದೆ. ರಾಜ್ಯ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ವೃಂದದ ’ಗ್ರೂಪ್ ಸಿ‘ ವಿಭಾಗದಲ್ಲಿ 13 ಗಣತಿದಾರರು ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಸಂಬಂಧ ಅ.6ರಂದು ಅಧಿಸೂಚನೆಯನ್ನೂ ಹೊರಡಿಸಿದೆ. ಅಧಿಸೂಚನೆಯ ವಿವರ ಈ ಕೆಳಕಂಡಂತಿದೆ. ಆನ್‌ಲೈನ್‌ ಮ‌ೂಲಕ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಇದೆ. ಅರ್ಜಿ ಸಲ್ಲಿಸಲು ನವೆಂಬರ್ 11ಕೊನೆ ದಿನವಾಗಿದೆ. ಈ ಕೆಳಗೆ ತಿಳಿಸಿರುವ ಕೆಪಿಎಸ್‌ಸಿ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಕೆ ವಿವರವನ್ನು ಪರಿಶೀಲಿಸಬಹುದು. ಅರ್ಜಿ ಶುಲ್ಕ ಏನಿದೆ? ಸಾಮಾನ್ಯ ಅಭ್ಯರ್ಥಿಗಳಿಗೆ ₹600, ಒಬಿಸಿ ಅಭ್ಯರ್ಥಿಗಳಿಗೆ ₹300 ಎಸ್.ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುಲ್ಕ ₹35. ಇದನ್ನು ಎಲ್ಲ ಅಭ್ಯರ್ಥಿಗಳು ಪಾವತಿಸಬೇಕು. ಶೈಕ್ಷಣಿಕ ವಿದ್ಯಾರ್ಹತೆ ಏನಿದೆ? ಪಿ.ಯು.ಸಿ (12ನೇ ತರಗತಿ) ಅಥವಾ ತತ್ಸಮಾನ ಕೋರ್ಸ್ ಮುಗಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ವಯೋಮಿತಿ– ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ ಮತ್ತು ಎಸ್.ಸಿ ಎಸ್.ಟಿ ಅಭ್ಯರ್ಥಿಗಳಿಗೆ 40 ವರ್ಷ. ವೇತನ ಶ್ರೇಣಿ ಯಾವುದು? ಗ್ರೂಪ್ ಸಿ ವಿಭಾಗದ ಈ ಹುದ್ದೆಗಳಿಗೆ ವೇತನ ಶ್ರೇಣಿ ₹ 21,400- ₹42000 ಇರುತ್ತದೆ. ಆಯ್ಕೆ ವಿಧಾನ ಹೇಗಿದೆ? ಈ ಹುದ್ದೆಗಳಿಗೆ ಎರಡು ಹಂತಗಳ ಪರೀಕ್ಷೆ ಇರುತ್ತದೆ. ಮೊದಲನೆ ಹಂತ ಕನ್ನಡ ಭಾಷಾ ಪರೀಕ್ಷೆ. ಎರಡನೆಯ ಹಂತ ಸ್ಪರ್ಧಾತ್ಮಕ ಪರೀಕ್ಷೆ. ಎಲ್ಲಾ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ. ಇದರಲ್ಲಿ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆ ಇದ್ದು , ಈ ಪರೀಕ್ಷೆ ಉತ್ತೀರ್ಣರಾಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು. ಇದು ಎಸ್.ಎಸ್.ಎಲ್.ಸಿ ಮಟ್ಟದ ಪ್ರಶ್ನೆ ಪತ್ರಿಕೆ ಆಗಿರುತ್ತದೆ. ಇನ್ನು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಲಾ 100 ಅಂಕಗಳಂತೆ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ. ( ಒಟ್ಟು 200 ಅಂಕಗಳು). ಪತ್ರಿಕೆ 1:ಸಾಮಾನ್ಯ ಜ್ಞಾನದ ಬಹು ಆಯ್ಕೆ ಮಾದರಿಯ 100 ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಗೆ ಉತ್ತರಿಸಲು ಒಂದೂವರೆ ಗಂಟೆಗಳ ಕಾಲಾವಕಾಶವಿರುತ್ತದೆ. ಇದು ಕೂಡ ಎಸ್.ಎಸ್.ಎಲ್.ಸಿ ಮಟ್ಟದ ಪ್ರಶ್ನೆ ಪತ್ರಿಕೆ ಆಗಿರುತ್ತದೆ. ಪಠ್ಯಕ್ರಮ ಹೀಗಿದೆ; ಪ್ರಚಲಿತ ಘಟನೆ, ದೈನಂದಿನ ಗ್ರಹಿಕೆಯ ವಿಷಯಗಳು, ಭಾರತದ ಸಂವಿಧಾನದ ಸ್ಥೂಲ ನೋಟದ ವಿಷಯಗಳು, ಕರ್ನಾಟಕ್ಕಕೆ ಸಂಬಂಧಿಸಿದ ಭಾರತದ ಇತಿಹಾಸ, ಭಾರತದ ಭೂಗೋಳ, ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕದ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು, ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳಿರುತ್ತವೆ. ಪತ್ರಿಕೆ 2: ಮೂರು ವಿಭಾಗದಲ್ಲಿ 100 ಅಂಕಗಳ 100 ಪ್ರಶ್ನೆಗಳಿರುತ್ತವೆ. ಸಾಮಾನ್ಯ ಕನ್ನಡ (35 ಅಂಕ), ಸಾಮಾನ್ಯ ಇಂಗ್ಲಿಷ್ (35 ಅಂಕ), ಕಂಪ್ಯೂಟರ್ ಜ್ಞಾನ (30 ಅಂಕ). ಇದಕ್ಕೆ ಉತ್ತರಿಸಲು 2 ಗಂಟೆ ಸಮಯ ಇರುತ್ತದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಎರಡು ಪತ್ರಿಕೆಗಳಲ್ಲೂ ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುತ್ತದೆ. ಅಂದರೆ ಪ್ರತಿ ತಪ್ಪು ಉತ್ತರಕ್ಕೆ ಅಭ್ಯರ್ಥಿಯು ಗಳಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು ಅಂಕವನ್ನು ಕಡಿತಗೊಳಿಸಲಾಗುತ್ತದೆ(ನೆಗೆಟಿವ್‌ ಕರೆಕ್ಷನ್‌). ಅಭ್ಯರ್ಥಿಗಳು ಎರಡು ಪತ್ರಿಕೆಗಳ ಪರೀಕ್ಷೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಆಯ್ಕೆಗೆ ಕನ್ನಡ ಭಾಷಾ ಪರೀಕ್ಷೆ ಅರ್ಹತಾ ಮಾನದಂಡ ಮಾತ್ರ ಆಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳು ಸೇರಿ ಶೇ 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ. ಪರೀಕ್ಷೆ ದಿನಾಂಕ ಪ್ರಕಟಣೆ: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೆಪಿಎಸ್‌ಸಿ ಜಾಲತಾಣ ... ನಲ್ಲಿ ಪರೀಕ್ಷಾ ದಿನಾಂಕ ಪ್ರಕಟಿಸಲಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ನಿಯಮಿತವಾಗಿ ಜಾಲತಾಣವನ್ನು ಪರಿಶೀಲಿಸುತ್ತಿರಬೇಕು. ವಿವಿಧ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸುವವರು ಮೀಸಲಾತಿ ನಮೂನೆಯನ್ನು ಅಧಿಸೂಚನೆಯಲ್ಲಿ ನೀಡಿರುವ ರೀತಿ ಪಡೆದು ಅರ್ಜಿ ಸಲ್ಲಿಸಬೇಕು. ಅಧಿಸೂಚನೆಗಾಗಿ ://... ಲಿಂಕ್ ನೋಡಿ.ಹುದ್ದೆಗಳ ವರ್ಗೀಕರಣ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೇಲೆ ಉಲ್ಲೇಖಿಸಿರುವಜಾಲತಾಣ ನೋಡಿ. ಆಟೊ ಚಾಲಕರಿಂದ ಓಲಾ, ಊಬರ್ : ಆ್ಯಪ್‌ಗಳಷ್ಟೆಇವರೇ ಮಾಡ್ತಿದಾರೆ ಚಾರ್ಜ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.