ರಾಜ್ಯದಲ್ಲಿ 26 ಅಗ್ನಿಶಾಮಕ ಅಧಿಕಾರಿ ಹುದ್ದೆ ಖಾಲಿ ಧಾರವಾಡ: ರಾಜ್ಯದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವೃಂದದ 26 ಹುದ್ದೆಗಳು ಖಾಲಿ ಇದ್ದು, ಬೆಂಗಳೂರಿನಲ್ಲೇ 13 ಹುದ್ದೆಗಳು ಖಾಲಿ ಇವೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿಯು ಜಿಲ್ಲೆಯ ಎಲ್ಲ ಅಗ್ನಿಶಾಮಕ ಠಾಣೆಗಳ ಉಸ್ತುವಾರಿ ಆಗಿರುತ್ತಾರೆ. ದುರಂತಗಳ ನಿರ್ವಹಣೆ, ಅವಘಡ ಸಂಭವಿಸಿದಂತೆ ಮುಂಜಾಗ್ರತೆ ವಹಿಸುವಿಕೆ ಅವರದ್ದೇ ಹೊಣೆ. ಆದರೆ, ಅಧಿಕಾರಿಗಳು, ನೌಕರರ ಕೊರತೆಯಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕಾರ್ಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ‘ವಿಜಯಪುರದ ಗೋದಾಮು ಅವಘಡದಲ್ಲಿ 7 ಕಾರ್ಮಿಕರ ಸಾವು, ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ 15 ಜನರ ಸಾವು ಪ್ರಕರಣ ಮುಂತಾದವು ಉಲ್ಲೇಖಿಸಿ ಇಂಥವು ಮರುಕಳಿಸದಂತೆ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ನಮ್ಮ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇರುವಾಗ ನಿರ್ವಹಿಸುವುದು ಹೇಗೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತಿಳಿಸಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹುದ್ದೆ ಭರ್ತಿ ಮಾಡುವಂತೆ ಕೋರಿ ಅಗ್ನಿ ಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಮಹಾನಿರ್ದೇಶಕರಿಗೆ ಇದೇ ವರ್ಷ ಅಕ್ಟೋಬರ್‌ನಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ‘ಇಲಾಖೆಯ 20 ಠಾಣಾ ಅಧಿಕಾರಿಗಳು ನಾಗಪುರದ ತರಬೇತಿ ಕೇಂದ್ರದಲ್ಲಿ ಈಚೆಗೆ ತರಬೇತಿ ಪಡೆದಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ’ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಎಲ್ಲೆಲ್ಲಿ ಹುದ್ದೆಗಳು ಖಾಲಿ? ಧಾರವಾಡ ಹುಬ್ಬಳ್ಳಿ–ಅಮರಗೋಳ ಗದಗ ಕಾರವಾರ ಯಾದಗಿರಿ ಕೊಪ್ಪಳ ಚಿಕ್ಕಮಗಳೂರು ಕೋಲಾರ ಶಿವಮೊಗ್ಗ ಚಾಮರಾಜನಗರ ಕೊಡಗು ಕಲಬುರಗಿ ಮೈಸೂರಿನ ಸರಸ್ವತಿಪುರಂ ಬನ್ನಿಮಂಟಪ ಬೆಂಗಳೂರು ದಕ್ಷಿಣ ವೈಟ್‌ಫೀಲ್ಡ್‌ ಅಕಾಡೆಮಿ ಯಶವಂತಪುರ ಜಕ್ಕೂರು ಯಲಹಂಕ ದೇವನಹಳ್ಳಿ ಸಹಿತ ವಿವಿಧೆಡೆ ಹುದ್ದೆಗಳು ಖಾಲಿ ಇವೆ. ಕೊರತೆ ನೀಗಿಸಲು ಆಯಾ ಅಧಿಕಾರಿಗಳಿಗೆ ಅಕ್ಕಪಕ್ಕದ ಜಿಲ್ಲೆಗಳ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.