ಐಎಫ್‌ಎಸ್‌: ರಾಜ್ಯದ ಸಾಧಕರು ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ ರಾಜ್ಯದ ಕೆಲವರು ರ‍್ಯಾಂಕ್‌ ಪಡೆದಿದ್ದು ವಿವರ ಇಂತಿದೆ. ವೈ.ಎಸ್.‌ಕಾವ್ಯಾಗೆ 7ನೇ ರ‍್ಯಾಂಕ್‌ ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): ಐಎಫ್‌ಎಸ್‌ ಪರೀಕ್ಷೆಯಲ್ಲಿ ವೈ.ಎಸ್.‌ಕಾವ್ಯಾ, ರಾಷ್ಟ್ರಮಟ್ಟದಲ್ಲಿ 7ನೇ ರ‍್ಯಾಂಕ್‌ ಗಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಯರದಕೆರೆಯ ಸೋಮಶೇಖರಪ್ಪ– ರತ್ನಮ್ಮ ದಂಪತಿ ಪುತ್ರಿಯಾಗಿರುವ ಕಾವ್ಯಾ, ಬೆಂಗಳೂರಿನ ಮೈಂಡ್‌ಟ್ರೀ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲ ಕಾಲ ಕಾರ್ಯನಿರ್ವಹಿಸಿದ್ದರು. ಯುಪಿಎಸ್‌ಸಿ ಪರೀಕ್ಷೆಗಾಗಿ ದೆಹಲಿಯ ಖಾಸಗಿ ಸಂಸ್ಥೆಯಲ್ಲಿ ತರಬೇತಿ ಪಡೆಯಲು ತೆರಳಿದ್ದರು. ಹಣಕಾಸಿನ ಸಮಸ್ಯೆಯಿಂದ ವಾಪಸ್‌ ಬೆಂಗಳೂರಿಗೆ ಬಂದು ಮತ್ತೆ ಕೆಲಸಕ್ಕೆ ಸೇರಿದ್ದರು. ಕನಸು ನನಸಾಗಿಸಿಕೊಳ್ಳಲು ಅವರು ಮತ್ತೆ ವೃತ್ತಿಗೆ ವಿದಾಯ ಹೇಳಿ ಛಲ ಬಿಡದೆ ಓದಿದ್ದರು. ‘ರ‍್ಯಾಂಕ್‌ ಸಂತೋಷ ತಂದಿದೆ. ಯುಪಿಎಸ್‌ಸಿ ಪರೀಕ್ಷೆಗಾಗಿ 2018ರಿಂದಲೂ ಪ್ರಯತ್ನ ಮಾಡಿದ್ದೆ. ಹಿಂದೆ ಸಂದರ್ಶನದ ಹಂತದವರೆಗೂ ತಲುಪಿದ್ದೆ. ಅಂತಿಮ ಪಟ್ಟಿಯಲ್ಲಿ ಅರ್ಹತೆ ಸಿಗಲಿಲ್ಲ. ಛಲ ಬಿಡಲಿಲ್ಲ ಎಂದು ಕಾವ್ಯಾ ಹೇಳಿದರು. ಸಾಫ್ಟ್‌ವೇರ್‌ನಿಂದ ಐಎಫ್‌ಎಸ್‌ಗೆ ಮೈಸೂರು: ‘ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದರೂ, ಅದನ್ನು ಬಿಟ್ಟು, ಆರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದೆ, ಐಎಫ್‌ಎಸ್‌ಗಾಗಿ ಎರಡು ಬಾರಿ ಪರೀಕ್ಷೆ ಎದುರಿಸಿದೆ. ಈಗ ಕನಸು ನನಸಾಗಿದೆ’ ಎಂಬುದು ಐಎಫ್ಎಸ್‌ನಲ್ಲಿ 33ನೇ ರ್‍ಯಾಂಕ್ ಪಡೆದ ಆರ್‌.ಎ. ಸೌಮ್ಯಾ ಅವರ ಸಂತಸದ ನುಡಿ. ಇವರು, ಬೋಗಾದಿ ಎರಡನೇ ಹಂತದ ನಿವಾಸಿ ನಿವೃತ್ತ ರೈಲ್ವೆ ಉದ್ಯೋಗಿ ಅಶೋಕ್‌ ಕುಮಾರ್‌– ಮಂಜುಳಾ ದಂಪತಿಯ ಪುತ್ರಿ. ‘ಕೆಲಸ ಬಿಟ್ಟ ನಂತರ ಮನೆಯಲ್ಲಿದ್ದುಕೊಂಡೇ ಪರೀಕ್ಷೆಗೆ ತಯಾರಿ ನಡೆಸಿದೆ. ಕುಟುಂಬದವರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ’ ಎನ್ನುತ್ತಾರೆ. 120ನೇ ರ್‍ಯಾಂಕ್‌ ಮೈಸೂರು: ‘ಎಚ್‌.ಡಿ ಕೋಟೆಯಲ್ಲಿ ಹುಟ್ಟಿದ್ದರಿಂದ ಬಾಲ್ಯ ದಿಂದಲೇ ಕಾಡಿನ ಬಗ್ಗೆ ಆಸಕ್ತಿಯಿತ್ತು. 2021ರಿಂದ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೇನೆ. ಐಎಫ್‌ಎಸ್‌ನಲ್ಲಿ ಉತ್ತಮ ರ್‍ಯಾಂಕ್ ಬಂದಿರುವುದು ಖುಷಿಯಾಗಿದೆ.’ ಎನ್ನುತ್ತಾರೆ 120ನೇ ರ್‍ಯಾಂಕ್ ಗಳಿಸಿರುವ ಚಿದಾನಂದ. ಎಚ್‌.ವಿ. ಇವರು ಶಿಕ್ಷಕ ವೆಂಕಟಸುಬ್ಬ ನಾಯಕ –ಮಂಜುಳಾ ಎಚ್‌.ಎಸ್‌ ದಂಪತಿ ಮಗ. ಚಕ್ರಧರ್‌ಗೆ 117ನೇ ರ‍್ಯಾಂಕ್ ಚಿಂತಾಮಣಿ (ಚಿಕ್ಕಬಳ್ಳಾಪುರ): ಅನಕಲ್ ಶೆಟ್ಟಿಹಳ್ಳಿಯ ಚಕ್ರಧರ್ 117ನೇ ರ‍್ಯಾಂಕ್ ಪಡೆದಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಯಶ ಕಂಡಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಬಿ.ಶ್ರೀನಿವಾಸರೆಡ್ಡಿ ರೈತರಾಗಿದ್ದು, ತಾಯಿ ಬೈಯ್ಯಮ್ಮ ಗೃಹಿಣಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.