ಗುಣಮಟ್ಟದ ಫಲಿತಾಂಶಕ್ಕೆ ‘ಸಹಪಾಠಿ’ ಸಹಕಾರಿ ದೇವನಹಳ್ಳಿ: ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಪ್ರಜಾವಾಣಿ ಹೊರತರುತ್ತಿರುವ ‘ಸಹಪಾಠಿ’ ಮಾರ್ಗದರ್ಶಕವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ಬಚ್ಚನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಪ್ರಜಾವಾಣಿ ‘ಸಹಪಾಠಿ’ ಪತ್ರಿಕೆ ವಿತರಿಸಿ ಅವರು ಮಾತನಾಡಿದರು. ಹಿಂದೆ ಪ್ರಚಲಿತ ವಿದ್ಯಾಮಾನಗಳ ಮಾಹಿತಿ ಪಡೆಯಲು ವಿಳಂಬವಾಗುತ್ತಿತ್ತು. ಪ್ರಸ್ತುತ, ದಿನಪತ್ರಿಕೆಗಳಿಂದ ಸಮಗ್ರ ಮಾಹಿತಿ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಸಹಪಾಠಿ ಪತ್ರಿಕೆ ಐಎಎಸ್‌, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶಿಯಾಗಿದೆ. ವಿದ್ಯಾರ್ಥಿಗಳು ಸಹಪಾಠಿ ಪತ್ರಿಕೆ ಓದುವ ಮೂಲಕ ಸದುಪಯೋಗ ಪಡೆಯಬೇಕೆಂದು ಅಭಿಪ್ರಾಯಪಟ್ಟರು. ನೂತನ ಸರ್ಕಾರಿ ಪ್ರೌಢಶಾಲೆ 4ಎಕರೆಯಲ್ಲಿ ಕಟ್ಟಡ, ಆಟದ ಮೈದಾನವಿದೆ. ಬೈಯಾಪ ಅನುದಾನದಲ್ಲಿ ಶಾಲಾ ಕಾಂಪೌಂಡ್‌ಗೆ ₹5 ಲಕ್ಷ ಬಿಡುಗಡೆಯಾಗಿದೆ. ರಂಗಮಂದಿರಕ್ಕೆ ₹5 ಲಕ್ಷ ಅನುದಾನ ಬಂದಿದೆ. ಕೊಳವೆ ಬಾವಿ ಕೊರೆಯಿಸಲು ಜಿಲ್ಲಾ ಟಾಸ್ಕ್‌ ಪೋರ್ಸ್‌ಗೆ ಸೂಚಿಸಲಾಗಿದೆ ಎಂದರು. ‘ಭಾವ ಮಿಲನ’ ಸಂಸ್ಥೆ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ,ಮಂಜುನಾಥ್‌ ಅವರ ವೈಯಕ್ತಿಕ ಕಾಳಜಿಯಿಂದ ಕಳೆದ ವರ್ಷನಾಲ್ಕು ಶಾಲೆಗಳಲ್ಲಿ ಪ್ರಜಾವಾಣಿ ಮುಖ್ಯ ಪತ್ರಿಕೆ ಜತೆಗೆ ಸಹಪಾಠಿಯನ್ನೂ ನೀಡಲಾಗಿದೆ. ಇದರ ಪರಿಣಾಮ ಕುಗ್ರಾಮ ಬಚ್ಚನಹಳ್ಳಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಬರಲು ಕಾರಣವಾಗಿದೆ ಎಂದರು. ರಾಜ್ಯ, ರಾಷ್ಟ್ರ ಮತ್ತು ವಿಶ್ವದ ಪ್ರಚಲಿತ ವಿದ್ಯಾಮಾನ ದಿನಪತ್ರಿಕೆಯಿಂದ ತಿಳಿಯಲು ಸಾಧ್ಯ. ಜತೆಗೆ ನೂರಾರು ವರ್ಷ ಪತ್ರಿಕೆ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಿಗೆ ಸಹಪಾಠಿ ಪತ್ರಿಕೆ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಸ್ವಾಮಿ ಮತ್ತು ಮುಖ್ಯ ಶಿಕ್ಷಕ ಮುರಳಿ ಮಾತನಾಡಿ, ಟಿವಿ ಮತ್ತು ಮೊಬೈಲ್‌ಗಳಿಂದ ವಿದ್ಯಾರ್ಥಿಗಳು ದೂರ ಉಳಿದು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಂಶೋಧನಾತ್ಮಕ, ಸಾಮಾಜಿಕ ಕಳಕಳಿಯ ಲೇಖನಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಸಹಪಾಠಿ ಸಾಮಾನ್ಯ ಜ್ಞಾನದ ಪರೀಕ್ಷೆಯನ್ನು ಪ್ರತಿ ಶುಕ್ರವಾರ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದೆ. ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗೂ ಪತ್ರಿಕೆ ಪೂರಕವಾಗಲಿದೆ ಎಂದರು. ಸಾದಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಅಂಜಲಿ ಮಾತನಾಡಿ, ಅನೇಕ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಶಿಕ್ಷಣದ ಕೋರ್ಸ್‌ಗಳಿಗೆ ಸಹಪಾಠಿ ಮಾರ್ಗದರ್ಶಕವಾಗಿದೆ. ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಹೆಚ್ಚು ಸೂಕ್ತ ಎಂಬುದರ ಪರಿಚಯ ತಿಳಿದುಕೊಳ್ಳಬಹುದು ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.