2nd 2022: ಸಾಧಕ ವಿದ್ಯಾರ್ಥಿಗಳ ಅಭಿಪ್ರಾಯಗಳು ಪ್ರಯತ್ನಕ್ಕೆ ಫಲ ಶೇ 100ಕ್ಕೆ ಪ್ರಯತ್ನ ಹಾಕಿದ್ದು, ಅದಕ್ಕೆ ಯಶಸ್ಸು ಲಭಿಸಿದೆ. ಪ್ರಥಮ ಸ್ಥಾನವನ್ನು ನಿರೀಕ್ಷಿಸಿರಲಿಲ್ಲ. ಉಪನ್ಯಾಸಕರಿಂದಲೂ ಪ್ರೋತ್ಸಾಹ ಸಿಕ್ಕಿತ್ತು. ಟ್ಯೂಷನ್‌ಗೆ ಹೋಗದೆ ತರಗತಿಯ ಪಾಠವನ್ನೇ ಅಭ್ಯಾಸ ಮಾಡಿದೆ. ನಿತ್ಯ ಮೂರು ತಾಸು ಓದುತ್ತಿದ್ದೆ. ಕಾಲೇಜಿನಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸಿದ್ದು ನೆರವಾಯಿತು. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆಯುವ ಆಸೆಯಿದೆ. -ಸಿಮ್ರನ್‌,ಆರ್‌.ವಿ ಕಾಲೇಜು, ಜಯನಗರ, ಬೆಂಗಳೂರು (ವಿಜ್ಞಾನ ವಿಭಾಗ, ಪ್ರಥಮ ರ‍್ಯಾಂಕ್ 598 ಅಂಕ) **** ಹೆಚ್ಚಿನ ಅಂಕ ತಂದ ಖುಷಿ ಹೆಚ್ಚಿನ ಅಂಕಗಳು ಬಂದಿರುವುದು ಖುಷಿ ತಂದಿದೆ. ಅಂದಿನ ಪಾಠವನ್ನು ಅಂದೇ ಅಭ್ಯಾಸ ನಡೆಸುತ್ತಿದ್ದೆ. ಅದಕ್ಕೆ ಪ್ರತಿಫಲವಾಗಿ ಅಂಕಗಳು ಬಂದಿವೆ. ಮುಂದಿನ ಶಿಕ್ಷಣದ ಬಗ್ಗೆ ಇನ್ನೂ ನಿರ್ಧರಿಸಿಲ್ಲ. -ನೀಲು ಸಿಂಗ್‌,ಬಿ.ಜಿ.ಎಸ್‌ ಪಿಯು ಕಾಲೇಜು, ನಗರೂರು, ದಾಸನಪುರ, ಬೆಂಗಳೂರು (ವಾಣಿಜ್ಯ ವಿಭಾಗ, ಪ್ರಥಮ ರ‍್ಯಾಂಕ್ 596 ಅಂಕ) **** ಕಠಿಣ ಪರಿಶ್ರಮಕ್ಕೆ ಫಲ ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹ ನೀಡಿದ್ದರಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಸರಿಯಾದ ಮಾರ್ಗದಲ್ಲಿ ಅಧ್ಯಯನ ನಡೆಸಿದರೆ ಉತ್ತಮ ಗಳಿಕೆ ಸಾಧ್ಯವಾಗಲಿದೆ. -ಆಕಾಶ್‌ ದಾಸ್‌,ಸೇಂಟ್‌ ಕ್ಲಾರೆಟ್‌ ಸಂಯುಕ್ತ ಪಪೂ ಕಾಲೇಜು, ಎಂಇಎಸ್‌ ರಸ್ತೆ, ಜಾಲಹಳ್ಳಿ, ಬೆಂಗಳೂರು (ವಾಣಿಜ್ಯ ವಿಭಾಗ, ಪ್ರಥಮ ರ‍್ಯಾಂಕ್ 596 ಅಂಕಗಳು) **** ಮನೆಯಲ್ಲೇ ಅಧ್ಯಯನ ಟ್ಯೂಷನ್‌ಗೆ ಹೋಗದೆ ಮನೆಯಲ್ಲಿ ನಿತ್ಯ ಅಭ್ಯಾಸ ನಡೆಸಿದ್ದೆ. ಉಪನ್ಯಾಸಕರು ತರಗತಿಯಲ್ಲಿ ಬೋಧಿಸುತ್ತಿದ್ದ ಪಾಠವನ್ನು ಅಲ್ಲಿಯೇ ಟಿಪ್ಪಣಿ ಮಾಡಿಕೊಂಡು ಮನೆಗೆ ಬಂದ ಬಳಿಕ ನನ್ನದೇ ನೋಟ್ಸ್‌ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಇದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. ಮಾನವ್‌ ವಿನಯ್‌ ಕೇಜ್ರಿವಾಲ್‌,ಜೈನ್‌ ಪಿಯು ಕಾಲೇಜು, ಜಯನಗರ 9ನೇ ಬ್ಲಾಕ್‌, ಬೆಂಗಳೂರು (ವಾಣಿಜ್ಯ ವಿಭಾಗ, ಪ್ರಥಮ ರ‍್ಯಾಂಕ್ 596 ಅಂಕ) **** ನಿರೀಕ್ಷೆಗಿಂತ ಹೆಚ್ಚು ಅಂಕ ರಾಜ್ಯಕ್ಕೆ ಟಾಪರ್ ಆಗಿದ್ದೇನೆ. ಖುಷಿ ಆಗುತ್ತಿದೆ. 595 ಅಂಕ ಬರುತ್ತವೆ ಎಂದು ನಿರೀಕ್ಷಿಸಿದ್ದೆ. ಈಗ ನಿರೀಕ್ಷೆಗಿಂತ ಒಂದು ಅಂಕಹೆಚ್ಚು ಬಂದಿದೆ. ಅಪ್ಪ, ಅಮ್ಮ ಮತ್ತು ಉಪನ್ಯಾಸಕರ ಪ್ರೋತ್ಸಾಹವೇ ನನ್ನ ಈ ಸಾಧನೆಗೆ ಕಾರಣ. - ಬಿ.ಆರ್.ನೇಹಾ,ಬಿಜಿಎಸ್ ಪಿ.ಯು ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ (ವಾಣಿಜ್ಯ ವಿಭಾಗ, ಪ್ರಥಮ ರ‍್ಯಾಂಕ್ 596 ಅಂಕ) **** ಯುಪಿಎಸ್‌ಸಿ ನನ್ನ ಕನಸು ಕಾಲೇಜಿನಲ್ಲಿ ಪ್ರತಿ ತರಗತಿ ನಂತರ ಟೆಸ್ಟ್‌ ಮಾಡಿಸುತ್ತಿದ್ದರು. ಹದಿನೈದು ಸಲ ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದರು. ಬರೆದು, ಬರೆದು ಪ್ರ್ಯಾಕ್ಟಿಸ್‌ ಮಾಡಿಸಿದರು. ಎಲ್ಲ ಶಿಕ್ಷಕರು ಉತ್ತಮವಾಗಿ ಪಾಠ ಮಾಡಿದರು. ಬೆಳಗಿನ ಜಾವ ಎದ್ದು ಹೆಚ್ಚು ಓದುತ್ತಿದ್ದೆ. ಅಂದಿನ ಪಾಠ ಅಂದೇ ಓದಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ. ಪದವಿಯೊಂದಿಗೆ ಯುಪಿಎಸ್‌ಸಿಗೆ ಸಿದ್ಧತೆ ನಡೆಸಿ, ಉನ್ನತ ಸ್ಥಾನಕ್ಕೇರುವ ಆಸೆ ಇದೆ’ ಎಂದು ಶ್ವೇತಾ ತಿಳಿಸಿದರು. - ಶ್ವೇತಾ ಭೀಮಾಶಂಕರ,ಇಂದು ಪಿಯು ಕಾಲೇಜು, ಕೊಟ್ಟೂರು, (ಕಲಾ ವಿಭಾಗ, ಪ್ರಥಮ ರ‍್ಯಾಂಕ್ 594) **** ಉನ್ನತ ಹುದ್ದೆಯ ಗುರಿ ನಮ್ಮ ತಂದೆ ಒಬ್ಬ ಫೋಟೋಗ್ರಾಫರ್‌. ಬಡ ಕುಟುಂಬ ನಮ್ಮದು. ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ‘ಇಂದು’ ಕಾಲೇಜಿಗೆ ಸೇರಿದೆ. ಉತ್ತಮ ಪಾಠ, ಅಭ್ಯಾಸ ಹಾಗೂ ಶ್ರದ್ಧೆಯಿಂದ ಓದಿದ್ದರಿಂದ ರ್‍ಯಾಂಕ್‌ ಬಂದಿದೆ. ಕೆಎಎಸ್‌, ಐಎಎಸ್‌ ಪರೀಕ್ಷೆ ಬರೆದು, ಉನ್ನತ ಹುದ್ದೆಗೇರಿ, ಮನೆಯ ಕಷ್ಟ ದೂರ ಮಾಡಬೇಕೆಂಬ ಉದ್ದೇಶ ನನ್ನದು - ಸಹನಾ ಮಡಿವಾಳರ,ಇಂದು ಪಿಯು ಕಾಲೇಜು, ಕೊಟ್ಟೂರು (ಕಲಾ ವಿಭಾಗ, ಪ್ರಥಮ ರ‍್ಯಾಂಕ್ 594) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.