ದೊಡ್ಡಬಳ್ಳಾಪುರ: ಮಂಗಳಕುಮಾರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ದೊಡ್ಡಬಳ್ಳಾಪುರ: ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕಿ' ಪ್ರಶಸ್ತಿಗೆ ತಾಲ್ಲೂಕಿನ ಬೀಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯಶಿಕ್ಷಕಿ ಎಂ.ಎಚ್‌.ಮಂಗಳಕುಮಾರಿ ಆಯ್ಕೆಯಾಗಿದ್ದಾರೆ. ಸೆ.5 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಮುಖ್ಯಮಂತ್ರಿಯಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಬೀಡಿಕೆರೆ ಗ್ರಾಮದಲ್ಲಿ ಶಾಲೆಗೆ ಒಂದೂವರೆ ಎಕರೆಯಷ್ಟು ವಿಶಾಲವಾದ ಜಮೀನು ಇದ್ದರೂ ಶಾಲೆ ಕೊಠಡಿ ಸೇರಿದಂತೆ ಇತರೆ ಮೂಲ ಸೌಕರ್ಯದಿಂದ ವಂಚಿತವಾಗಿತ್ತು. ಇಂತಹ ಶಾಲೆಗೆ ವಿವಿಧ ಕಂಪನಿಗಳ ಸಿಎಸ್‌ಆರ್‌ ಅನುದಾನದಲ್ಲಿ ಆಧುನಿಕ ಸೌಲಭ್ಯ ಒಳಗೊಂಡ ತರಗತಿಯ ಕೊಠಡಿಗಳು, ಸೋಲಾರ್‌ ವಿದ್ಯುತ್‌, ಕಂಪ್ಯೂಟರ್‌, ಹೈಟೆಕ್‌ ಶೌಚಾಲಯ ಸೇರಿದಂತೆ ಹಲವಾರು ಸೌಲಭ್ಯ ತರುವಲ್ಲಿ ಮುಖ್ಯಶಿಕ್ಷಕಿ ಎಂ.ಎಚ್‌. ಮಂಗಳಕುಮಾರಿ ಶ್ರಮಿಸಿದ್ದಾರೆ. ಇವರ ಕಾರ್ಯವೈಖರಿಯಿಂದ 2024ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಕಾಶ್‌ಗೆ ಜಿಲ್ಲಾ ಪ್ರಶಸ್ತಿ ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಚ್‌.ಎನ್‌.ಪ್ರಕಾಶ್‌ ಅವರಿಗೆ 2024ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. 1989ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಶಿಕ್ಷಕ ವೃತ್ತಿ ಆರಂಭಿಸಿದ ಎಚ್‌.ಎನ್‌.ಪ್ರಕಾಶ್, ನಂತರ ಶಿಕ್ಷಣ ಇಲಾಖೆಯಲ್ಲಿ 6 ವರ್ಷಗಳ ಕಾಲ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿ, ಸಿ.ಆರ್‌.ಪಿ ಮತ್ತು ಬಿ.ಆರ್‌.ಪಿ ಕರ್ತವ್ಯಗಳ ಕುರಿತಾಗಿ ಪುಸ್ತಕ ರಚನೆ ಹಾಗೂ ಚಿಣ್ಣರ ಕರ್ನಾಟಕ ದರ್ಶನ ರಾಜ್ಯ ಮಟ್ಟದ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಇಲಾಖೆಯ ಸೂಕ್ಷ್ಮಯೋಜನೆ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.