ಸ್ಥಿತಪ್ರಜ್ಞತೆಯಿಂದ ಸಂತೋಷ ಸಾಮಾನ್ಯವಾಗಿ ಎಲ್ಲರೂ ತಮ್ಮ ಜೀವನದಲ್ಲಿ ಸದಾ ಸುಖ, ಸಂತೋಷ, ನೆಮ್ಮದಿ, ಆನಂದವಿರಬೇಕೆಂದು ಬಯಸುತ್ತಾರೆ. ಸುಖವನ್ನು ನಮ್ಮ ಇಂದ್ರಿಯಗಳ ಸಹಾಯದಿಂದ, ವಿದ್ಯೆಯಿಂದ, ಉನ್ನತ ಪದವಿಯಿಂದ, ಸಂಪತ್ತಿನಿಂದ ಅಥವಾ ಹಿರಿತನದಿಂದ ಪಡೆಯಬಹುದು. ಆದರೆ ಸಂತೋಷ ಎಂಬುದು ಒಂದು ಮಾನಸಿಕ ಸ್ಥಿತಿ. ಇದನ್ನು ಶಾಶ್ವತವಾಗಿ ಹೊಂದಲು ಅಸಾಧ್ಯವೆಂದೇ ನನ್ನ ಭಾವನೆ. ಮುಗ್ಧನಾಗಿದ್ದು, ಸರಳತೆ ಸದ್ಗುಣಗಳನ್ನು ಹೊಂದಿದವ ಸ್ವಲ್ಪ ಮಟ್ಟಿಗೆ ಸಂತೋಷದಿಂದಿರಬಹುದು. ಪ್ರತಿ ಜೀವಿಯೂ ತನ್ನ ಗುರಿಯನ್ನು ಪಡೆಯಲು ಮಾಡುವ ಪ್ರಯತ್ನವೇ ಜೀವನ. ಆಗ ಎದುರಾಗುವ ಕಷ್ಟಗಳು ಅವನಿಗೆ ದುಃಖವನ್ನು ನೀಡುತ್ತವೆ. ಸತತ ಪ್ರಯತ್ನಗಳಿಂದ ಆ ಕಷ್ಟಗಳನ್ನು ಪರಿಹರಿಸಿಕೊಂಡಾಗ ಸುಖವನ್ನು ಹೊಂದಬಹುದು. ಯಾವ ಗುರಿಯೂ ಇಲ್ಲದೆ, ಯಾವ ಆಸೆಯೂ ಇಲ್ಲದೆ ಕಾಲ ಹೇಗೆ ಬರುತ್ತದೋ ಹಾಗೆ ಬದುಕುವ ಜೀವಿಗೆ ದುಃಖವೇ ಇರುವುದಿಲ್ಲ. ಅಂದರೆ ಸ್ಥಿತಪ್ರಜ್ಞನು ಮಾತ್ರ ಸದಾ ಸಂತೋಷದಿಂದಿರಲು ಸಾಧ್ಯ. ಭೌತಿಕ ಪ್ರಪಂಚವನ್ನು ಹೆಚ್ಚು ಅವಲಂಬಿಸಿ ಜೀವನ ನಡೆಸುವವನಿಗೆ ಸಂತೋಷ ಮರೀಚಿಕೆಯೇ. ಬಂದದ್ದೆಲ್ಲಾ ಬರಲಿ ಸುಖ–ದುಃಖಗಳನ್ನು ಸಮನಾಗಿ ಸ್ವೀಕರಿಸುವ ಮನಃಸ್ಥಿತಿಯನ್ನು ಹೊಂದಿದಾಗ ಸಂತೋಷವಾಗಿ ಮನಸ್ಸು ಆನಂದದಿಂದ ನೆಮ್ಮದಿ ಪಡೆಯುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.