ಶಾರದಾ ಕಾಲೇಜಿಗೆ ರ‍್ಯಾಂಕ್‌ ತಂದುಕೊಟ್ಟವರು ಮಂಗಳೂರು: ಶಾರದಾ ಪಿಯು ಕಾಲೇಜಿನ ಪ್ರಥಮ್‌ ಎನ್‌. ಮತ್ತು ಶಮಿತಾ ಕುಮಾರಿ ವಿಜ್ಞಾನ ವಿಭಾಗದಲ್ಲಿ 591 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅವರು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಬೆಳೆಯಬೇಕೆಂಬ ಕನಸು ಹೊತ್ತಿದ್ದಾರೆ. ‘ನಾನು ಬರೀ ಓದಿನಲ್ಲಿ ಮುಳುಗಿದವನಲ್ಲ. ಈ ರ‍್ಯಾಂಕ್‌ ನೋಡಿದರೆ ಖುಷಿಯಾಗುತ್ತದೆ. ನಾನು ಪಿಯುಸಿಯಲ್ಲಿ ಚೆನ್ನಾಗಿ ಆಟವಾಡುತ್ತಿದ್ದೆ. ಕಲಿಯುವ ಸಂದರ್ಭದಲ್ಲಿ ಮನಸ್ಸಿಟ್ಟು ಓದುತ್ತಿದ್ದೆ. ಶಿಕ್ಷಕರು ಕೂಡ ಕಲಿಕೆಗೆ ಬಹಳ ನೆರವುನೀಡಿದ್ದಾರೆ. ಮಾಹಿತಿಯನ್ನು, ವಿವರಗಳನ್ನು ವಾಟ್ಸ್‌ ಆಪ್‌ನಲ್ಲಿಯೂ ಹಂಚಿಕೊಂಡು ಪ್ರೋತ್ಸಾಹ ನೀಡುತ್ತಿದ್ದರು ಎಂದು ಅವರು ’ಪ್ರಜಾವಾಣಿ’ ಜೊತೆ ಮಾತನಾಡುತ್ತ ಹೇಳಿದರು. ಅಪ್ಪ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಎಫ್‌ಡಿಎ ಸಿಬ್ಬಂದಿ ಎಸ್‌. ನಾಗರಾಜ್‌. ಅಮ್ಮ ವೈಷ್ಣವಿ ಶಿಕ್ಷಕಿ. ಶಮಿತಾ ಕುಮಾರಿ 591 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಗಿಟ್ಟಿಸಿಕೊಂಡ ಮತ್ತೊಬ್ಬ ವಿದ್ಯಾರ್ಥಿನಿ. ಎಲೆಕ್ಟ್ರಾನಿಕ್‌ ಎಂಜಿನಿಯರ್‌ ಆಗಬೇಕು ಎಂಬ ಉದ್ದೇಶದಿಂದ ಆಕೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಬರೀ ಓದಿನಲ್ಲಿಯೇ ಮುಳುಗದೇ ಚಿತ್ರ ಕಲೆ, ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಪ್ಪ ವೆಂಕಟೇಶ್ವರ್‌ ಕುಮಾರ್‌ ಅಮ್ಮ ಕಲ್ಪನಾ ಅವರಿಗೆ ಮಗಳ ಸಾಧನೆಯ ಬಗ್ಗೆ ಬಹಳ ಹೆಮ್ಮೆ. ರೋಹನ್‌ ರಾವ್ ಅವರಿಗೆ 590 ಅಂಕಗಳು ಲಭಿಸಿದ್ದು, ವಿಜ್ಞಾನಿ ಆಗುವ ಆಸೆಯಿದೆ. ಉಡುಪಿಯ ಉಪ್ಪುಂದ ನಿವಾಸಿ ಆಗಿರುವ ಶಾರದಾ ಕಾಲೇಜಿನ ಎಸ್‌ಕೆಡಿಬಿ ವಿದ್ಯಾರ್ಥಿ ವಸತಿ ನಿಲಯದಲ್ಲಿ ಓದಿದ ವಿದ್ಯಾರ್ಥಿ. ‘ಬೆಳಿಗ್ಗೆ 5 ಗಂಟೆ ಅಧ್ಯಯನ ಆರಂಭಿಸುವುದು ಕಡ್ಡಾಯವಾಗಿತ್ತು. ಒಟ್ಟು 5 ತಾಸು ಅಧ್ಯಯನ ಮಾಡುವಂತಹ ವಾತಾವರಣವನ್ನು ಹಾಸ್ಟೆಲ್‌ನಲ್ಲಿ ನಿರ್ಮಿಸಿದ್ದರು. ಉತ್ತಮ ಆಹಾರ, ಪೂರಕ ವಾತಾವರಣದಿಂದಾಗಿ ನನಗೆ ಓದು ಕಷ್ಟವಾಗಲಿಲ್ಲ. ಏನಾದರೂ ಸಂಶಯವಿದ್ದರೆ ಪರಿಹಾರ ಮಾಡಲು ಹಾಸ್ಟೆಲ್‌ನಲ್ಲಿಯೂ ಶಿಕ್ಷಕರು ಸದಾ ಸಿದ್ಧರಿರುತ್ತಿದ್ದರು. ಆದ್ದರಿಂದ ಈ ಸಾಧನೆ ಸಾಧ್ಯವಾಯಿತು’ ಎಂದು ’ಪ್ರಜಾವಾಣಿ’ ಜೊತೆ ಮಾತನಾಡುತ್ತ ತಿಳಿಸಿದರು. ಹಿಂದುಸ್ಥಾನೀ ಸಂಗೀತ ಕಲಿತಿರುವ ಪ್ರಥಮ್‌ ತಬಲಾ ವಾದಕ. ಅಪ್ಪ ಜಗದೀಶ್‌ ಮತ್ತು ಅಮ್ಮ ವಾಣಿಗೆ ಮಗನ ಸಾಧನೆಯ ಬಗ್ಗೆ ಹೆಮ್ಮೆ. ಕಾಲೇಜಿನ ವಿದ್ಯಾರ್ಥಿಗಳನ್ನು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್‌ ಅಭಿನಂದಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.