| ಹಲವು ಜಿಲ್ಲೆಗಳ ಜಿಗಿತ, ಕುಸಿತ; ಯಾವುದಕ್ಕೆ, ಯಾವಾಗ ಕೊನೆಯ ದಿನ? ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಲವು ಜಿಲ್ಲೆಗಳು ಸುಧಾರಣೆ ಕಂಡರೆ, ಕೆಲ ಜಿಲ್ಲೆಗಳು ಕೆಳಕ್ಕೆ ಕುಸಿದಿವೆ. ಉಡುಪಿ ಜಿಲ್ಲೆ ಶೇ 94ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದಿದೆ. ಕಳೆದ ವರ್ಷ 14ನೇ ಸ್ಥಾನದಲ್ಲಿತ್ತು. ಹಿಂದಿನ ವರ್ಷ 17ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಈ ವರ್ಷ 2 ಸ್ಥಾನಕ್ಕೆ (ಶೇ 92.12) ಜಿಗಿದಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆ 28ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. 2023ರ ಫಲಿತಾಂಶದಲ್ಲಿ ಅಗ್ರಸ್ಥಾನದಲ್ಲಿದ್ದ ಜಿಲ್ಲೆಗಳು ಈ ಬಾರಿ ಕುಸಿತ ಕಂಡಿವೆ. ಮೊದಲ ಸ್ಥಾನದಲ್ಲಿದ್ದ ಚಿತ್ರದುರ್ಗ 21ನೇ ಸ್ಥಾನಕ್ಕೆ ಕುಸಿದಿದೆ. ದ್ವಿತೀಯ ಸ್ಥಾನದಲ್ಲಿದ್ದ ಮಂಡ್ಯ 19ಕ್ಕೆ, 3ನೇ ಸ್ಥಾನದಲ್ಲಿದ್ದ ಹಾಸನ 6ನೇ ಸ್ಥಾನಕ್ಕೆ, 6ನೇ ಸ್ಥಾನದಲ್ಲಿದ್ದ ಕೋಲಾರ 19ಕ್ಕೆ, 10ರಲ್ಲಿದ್ದ ವಿಜಯನಗರ 27ಕ್ಕೆ, 7ರಲ್ಲಿದ್ದ ಚಾಮರಾಜನಗರ 24ನೇ ಸ್ಥಾನಕ್ಕೆ ಕುಸಿದಿವೆ. ಕಳೆದ ಬಾರಿ ಕೊನೆಯ ಸ್ಥಾನದಲ್ಲಿದ್ದ ಯಾದಗಿರಿ ಈ ಬಾರಿಯೂ ಅದೇ ಸ್ಥಾನದಲ್ಲಿದೆ. ಯಾವುದಕ್ಕೆ, ಯಾವಾಗ ಕೊನೆಯ ದಿನ? ಉತ್ತರ ಪತ್ರಿಕೆಗಳ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 13ರಿಂದ 22ರವರೆಗೆ ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ಮೇ 9ರಿಂದ 16ರವರೆಗೆ, ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಶುಲ್ಕ ಭರಿಸುವ ವಿದ್ಯಾರ್ಥಿಗಳು ಮೇ 17ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080–23310075, 23310076 ಸಂಪರ್ಕಿಸಬಹುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ವೇಳಾಪಟ್ಟಿ ಜೂನ್‌ 7–ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌ (ಎನ್‌ಸಿಇಆರ್‌ಟಿ), ಸಂಸ್ಕೃತ, 8–ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯೂಎಫ್‌ ವಿಷಯಗಳು, 10–ಗಣಿತ, 11–ಅರ್ಥಶಾಸ್ತ್ರ, ಎಂಜನಿಯರಿಂಗ್‌ ವಿಷಯಗಳು, 12–ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ, 13–ದ್ವಿತೀಯ ಭಾಷೆಗಳಾದ ಇಂಗ್ಲಿಷ್‌, ಕನ್ನಡ, 14–ಸಮಾಜ ವಿಜ್ಞಾನ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.