2022‌ರ ವೇಳೆಗೆ ಎಲ್ಲರಿಗೂ ಶಿಕ್ಷಣ: ಸುರೇಶ್‌ ಕುಮಾರ್‌ ಚಾಮರಾಜನಗರ: ‘2022ರ ಒಳಗೆ ರಾಜ್ಯದ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಹೇಳಿದರು. ತಾಲ್ಲೂಕಿನಲ್ಲಿ ಚಂದಕವಾಡಿ ಸರ್ಕಾರಿ ಶಾಲೆಯಲ್ಲಿ ದ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2022ರ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗುತ್ತದೆ. ಆ ಹೊತ್ತಿಗೆ ದೇಶದ ಎಲ್ಲ ಕುಟುಂಬಗಳು ಮನೆಯನ್ನು ಹೊಂದಿರಬೇಕು ಎಂಬ ಕನಸ್ಸನ್ನು ಪ್ರಧಾನಿ ಮೋದಿ ಅವರು ಕಂಡಿದ್ದಾರೆ. ಮನೆ ಮಾತ್ರವಲ್ಲದೇ ಎಲ್ಲ ಮೂಲಸೌಕರ್ಯಗಳು ಹಾಗೂ ಮನೆಯ ಯಜಮಾನನಿಗೆ ಆದಾಯ ಸೃಷ್ಟಿಸುವ ಮಾರ್ಗವನ್ನು ತೋರಿಸಬೇಕು ಎಂಬುದು ಅವರ ಆಶಯ. ಎಲ್ಲ ರಾಜ್ಯಗಳು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ’ ಎಂದರು. ‘ನಮ್ಮ ಶಿಕ್ಷಣ ಇಲಾಖೆಯ ವಿಷಯಕ್ಕೆ ಬಂದರೆ, ನಮ್ಮ ರಾಜ್ಯದ ಒಂದೇ ಒಂದು ಮಗು ಕೂಡ ಯೋಗ್ಯ ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲ ಮಕ್ಕಳು ಶಾಲೆಗೆ ಬಂದು ಕಲಿಯಬೇಕು. ಮಕ್ಕಳಲ್ಲಿ ದೇಶ ಭಕ್ತಿ, ಸಮಾಜಮುಖಿ ಚಿಂತನೆ ಬೆಳೆಸಬೇಕು. ಈ ದೃಷ್ಟಿಯಿಂದ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. 2022ರ ವೇಳೆಗೆ ಈ ಗುರಿಗಳನ್ನು ಸಾಧಿಸಬೇಕು ಎಂಬುದು ಇಲಾಖೆಯ ಆಶಯ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.