ಟಿ20 ನಾಯಕನ ಸ್ಥಾನದಿಂದ ಹಿಂದೆ ಸರಿದ ಕೊಹ್ಲಿ ಕುರಿತು ಗಂಗೂಲಿ ಹೇಳಿದ್ದೇನು? ಟಿ20 ನಾಯಕನ ಸ್ಥಾನದಿಂದ ನಿರ್ಗಮಿಸುವ ಬಗ್ಗೆ ವಿರಾಟ್‌ ಕೊಹ್ಲಿ ತೆಗೆದುಕೊಂಡಿರುವ ನಿರ್ಧಾರದ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ಭವಿಷ್ಯದ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗಂಗೂಲಿ ತಿಳಿಸಿದ್ದಾರೆ. ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಸೌರವ್‌ ಗಂಗೂಲಿ, 'ಭಾರತದ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿಜವಾದ ಆಸ್ತಿಯಾಗಿದ್ದಾರೆ. ಅವರು ಉತ್ಸಾಹದಿಂದ ತಂಡವನ್ನು ಮುನ್ನಡೆಸಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಆದರೆ, ಭವಿಷ್ಯದ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ. 'ಟಿ20 ನಾಯಕನಾಗಿ ವಿರಾಟ್ ಕೊಹ್ಲಿ ನೀಡಿರುವ ಅದ್ಭುತ ಪ್ರದರ್ಶನಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅವರು ಭಾರತಕ್ಕಾಗಿ ರನ್ ಗಳಿಸುವುದನ್ನು ಮುಂದುವರಿಸಲಿ ಎಂದು ಹಾರೈಸುತ್ತೇವೆ. ಅವರಿಗೆ ಶುಭವಾಗಲಿ' ಎಂದು ಗಂಗೂಲಿ ಹೇಳಿದ್ದಾರೆ. ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ನಂತರ ಟಿ20 ನಾಯಕ ಸ್ಥಾನದಿಂದ ನಿರ್ಗಮಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಇದನ್ನೂ ಓದಿ: ಟಿ20 ನಾಯಕನ ಸ್ಥಾನದಿಂದ ನಿರ್ಗಮಿಸಲು ವಿರಾಟ್‌ ಕೊಹ್ಲಿ ನಿರ್ಧಾರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.