ಗಂಗೂಲಿ ಧೋನಿ: ಯಾರು ಶ್ರೇಷ್ಠ ನಾಯಕ? ಸೆಹ್ವಾಗ್ ಉತ್ತರ ನವದೆಹಲಿ: ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕರ ಸಾಲಿನಲ್ಲಿ ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಗುರುತಿಸಿಕೊಂಡಿದ್ದಾರೆ. ಈ ಮಾಜಿ ನಾಯಕರು ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಆದರೆ ಈ ಮಾಜಿ ಆಟಗಾರರ ಪೈಕಿ ಯಾರು ಶ್ರೇಷ್ಠ ನಾಯಕ ಎಂಬುದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಪಂಡಿತರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಈ ನಡುವೆ ಗಂಗೂಲಿ ಹಾಗೂ ಧೋನಿ ನಾಯಕತ್ವದಡಿಯಲ್ಲಿ ಆಡಿರುವ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ. 'ಅವರಿಬ್ಬರೂ ಅತ್ಯುತ್ತಮ ನಾಯಕರು. ಆದರೆ ನನ್ನ ಪ್ರಕಾರ ಸೌರವ್ ಗಂಗೂಲಿ ಶ್ರೇಷ್ಠ ಕಪ್ತಾನ. ಯಾಕೆಂದರೆ ಗಂಗೂಲಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ತಂಡವನ್ನು ಕಟ್ಟಿದ್ದರು' ಎಂದು ವೀರು ವಿವರಿಸಿದ್ದಾರೆ. 'ವಿದೇಶದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಹೇಗೆ ಎಂಬುದನ್ನು ದಾದಾ ಕಲಿಸಿಕೊಟ್ಟರು ' ಎಂದು ಯೂಟ್ಯೂಬ್ ಶೋದಲ್ಲಿ ಸೆಹ್ವಾಗ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ವರದಿ ಮಾಡಿದೆ. 'ಗಂಗೂಲಿ ಯುವ ಹಾಗೂ ಪ್ರತಿಭಾವಂತ ತಂಡವನ್ನು ಕಟ್ಟಿದರು. ಅಲ್ಲಿಂದ ಭಾರತ ಹೊಸ ಯುಗದತ್ತ ಚಲಿಸಿತ್ತು. ಆ ಉತ್ತಮ ಕೆಲಸವನ್ನು ಧೋನಿ ಮುಂದುವರಿಸಿದರು' ಎಂದು ವೀರು ತಿಳಿಸಿದ್ದಾರೆ. 'ಎಂ.ಎಸ್. ಧೋನಿ ಆಗಲೇ ಸದೃಢ ತಂಡವನ್ನು ಮುನ್ನಡೆಸುವ ಪ್ರಯೋಜನವನ್ನು ಹೊಂದಿದ್ದರು. ಅವರು ನಾಯಕರಾದಾಗ ತಂಡ ಕಟ್ಟುವುದು ಕಷ್ಟಕರವಾಗಿರಲಿಲ್ಲ. ಇಬ್ಬರು ಅತ್ಯುತ್ತಮ ನಾಯಕರು. ಆದರೂ ನನ್ನ ಪ್ರಕಾರ ಗಂಗೂಲಿ ಶ್ರೇಷ್ಠ' ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.