ಡೆಲ್ಲಿಗೆ ಪಂತ್ ಬಲ; ಹೈದರಾಬಾದ್‌ಗೆ ರಶೀದ್‌ ಮೇಲೆ ನಿರೀಕ್ಷೆ ಚೆನ್ನೈ: ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಲೆಗ್ ಸ್ಪಿನ್ನರ್ ರಶೀದ್ ಖಾನ್ ನಡುವಿನ ಹೋರಾಟ ಭಾನುವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ಮುಖಾಮುಖಿಯ ಪ್ರಮುಖ ಆಕರ್ಷಣೆಯಾಗಲಿದೆ. ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದ ಪಿಚ್‌ ಬಗ್ಗೆ ಈಗಾಗಲೇ ಟೀಕೆಗಳು ಕೇಳಿಬಂದಿದ್ದು ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಯಾವ ತಂತ್ರಗಳನ್ನು ಅನುಸರಿಸುತ್ತಾರೆ ಎಂಬುದು ಕುತೂಹಲದ ವಿಷಯ. ಇದು ಇಲ್ಲಿ ನಡೆಯಲಿರುವ 10ನೇ ಮತ್ತು ಕೊನೆಯ ಪಂದ್ಯವಾಗಲಿದೆ. ಮುಂಬೈಯಲ್ಲೂ ಭಾನುವಾರ ಕೊನೆಯ ಪಂದ್ಯ. ಸೋಮವಾರದಿಂದ ಅಹಮದಾಬಾದ್ ಮತ್ತು ದೆಹಲಿಯಲ್ಲಿ ಹಣಾಹಣಿ ನಡೆಯಲಿದೆ. ಚೆನ್ನೈಯಲ್ಲಿ ಈ ವರೆಗೆ ನಡೆದ ಒಂಬತ್ತು ಪಂದ್ಯಗಳ ಪೈಕಿ ಕೆಲವೇ ಕೆಲವು ಪಂದ್ಯಗಳಲ್ಲಿ ಮಾತ್ರ 170ಕ್ಕೂ ಅಧಿಕ ರನ್ ದಾಖಲಾಗಿದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳಿಗೆ ಇಲ್ಲಿನ ಪಿಚ್ ಸವಾಲಾಗಿದೆ. ಡೆಲ್ಲಿ ತಂಡದ ಆರಂಭಿಕ ಜೋಡಿ ಪೈಕಿ ಶಿಖರ್ ಧವನ್ ಉತ್ತಮ ಫಾರ್ಮ್‌ನಲ್ಲಿದ್ದು ಪೃಥ್ವಿ ಶಾ ಕೆಲವು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ. ‘ಹ್ಯಾಟ್ರಿಕ್’ ಸೋಲಿನ ನಂತರ ಗೆಲುವಿನ ಲಯಕ್ಕೆ ಮರಳಿರುವ ಹೈದರಾಬಾದ್‌ ತಂಡಕ್ಕೆ ಕೇನ್ ವಿಲಿಯಮ್ಸನ್ ಮರಳಿರುವುದು ಬಲ ತುಂಬಿದೆ. ಮನೀಷ್ ಪಾಂಡೆ, ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ ಅವರ ಬಲವೂ ತಂಡಕ್ಕೆ ಇದೆ. ಆದರೆ ನಟರಾಜನ್ ಅವರು ತಂಡದಿಂದ ಹೊರಬಿದ್ದಿರುವುದು ತಂಡಕ್ಕೆ ಹಿನ್ನಡೆಯಾಗಿದ್ದು ರಶೀದ್ ಖಾನ್ ಜವಾಬ್ದಾರಿ ಹೆಚ್ಚಾಗಿದೆ. ಭುವನೇಶ್ವರ್ ಕುಮಾರ್‌, ಸಂದೀಪ್ ಶರ್ಮಾ ಮತ್ತು ಸಿದ್ಧಾರ್ಥ್ ಕೌಲ್ ಬೌಲಿಂಗ್‌ನಲ್ಲಿ ಇನ್ನೂ ಲಯ ಕಂಡುಕೊಂಡಿಲ್ಲ. ಆಲ್‌ರೌಂಡರ್ ವಿಜಯಶಂಕರ್ ಭರವಸೆ ಮೂಡಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರದೇ ಇರುವುದು ಡೆಲ್ಲಿ ಕ್ಯಾಪಿಟಲ್ಸ್‌ನ ಚಿಂತೆಗೆ ಕಾರಣವಾಗಿದೆ. ಕ್ರಿಸ್ ವೋಕ್ಸ್‌, ಕಗಿಸೊ ರಬಾಡ, ಆವೇಶ್ ಖಾನ್‌ ಮತ್ತು ಲಲಿತ್ ಯಾದವ್ ಮೇಲೆ ತಂಡ ಭರವಸೆ ಇರಿಸಿಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.