ಕೋಲ್ಕತ್ತ ವಿರುದ್ಧದ ಸೋಲು ಎಚ್ಚರಿಕೆ ಗಂಟೆ: ವಿರಾಟ್ ಕೊಹ್ಲಿ ಅಬುಧಾಬಿ: ಕೋಲ್ಕತ್ತ ವಿರುದ್ಧ 9 ವಿಕೆಟ್‌ಗಳ ಹೀನಾಯ ಸೋಲು ನಮ್ಮ ತಂಡಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಪಂದ್ಯದ ಬಳಿಕ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಸರಣಿ ಪುನರಾರಂಭಗೊಂಡಿದ್ದು, ದ್ವಿತೀಯಾರ್ಧದ ತಮ್ಮ ಮೊದಲ ಪಂದ್ಯದಲ್ಲೇ ಕೊಹ್ಲಿ ಪಡೆ ಮುಗ್ಗರಿಸಿದೆ. 19 ಓವರ್‌ಗಳಲ್ಲಿ ಕೇವಲ 92 ರನ್‌ಗೆ ಆಲೌಟ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಕೋಲ್ಕತ್ತ, 10 ಓವರ್‌ಗಳಲ್ಲೇ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು. ‘ಈ ಹೀನಾಯ ಕುಸಿತವು ನಮಗೆ ಎಚ್ಚರಿಕೆ ಗಂಟೆಯಾಗಿದೆ. ಇದು ಸರಣಿಯ ಎರಡನೇ ಆರಂಭವಾಗಿದ್ದು, ಮುಂದೆ ಏನು ಮಾಡಬೇಕೆಂದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಆ ಕುರಿತಂತೆ ನಾವು ಕಾರ್ಯಪ್ರವೃತ್ತರಾಗುತ್ತೇವೆ’ಎಂದು ವಿರಾಟ್ ಹೇಳಿದ್ದಾರೆ. ಐಪಿಎಲ್ 14ನೇ ಆವೃತ್ತಿಯಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತಂಡ ಐದರಲ್ಲಿ ಗೆಲುವು ಸಾಧಿಸಿ10 ಅಂಕಗಳನ್ನು ಕಲೆ ಹಾಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.