ಪ್ರಸಿದ್ಧ ಕೃಷ್ಣ, ಅಮಿತ್ ಮಿಶ್ರಾ ಚೇತರಿಕೆ ನವದೆಹಲಿ: ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಮತ್ತು ಸ್ಪಿನ್ನರ್ ಅಮಿತ್ ಮಿಶ್ರಾ ಬುಧವಾರ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ವೃದ್ಧಿಮಾನ್ ಸಹಾ ಅವರು ಮಂಗಳವಾರ ಚೇತರಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಪ್ರಸಿದ್ಧ ಕೃಷ್ಣ ಅವರನ್ನು ಕಾಯ್ದಿರಿಸಿದ ಆಟಗಾರನನ್ನಾಗಿ ಸೇರಿಸಿಕೊಳ್ಳಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂದರ್ಭದಲ್ಲಿ ಪ್ರಸಿದ್ಧ ಮತ್ತು ಮಿಶ್ರಾಗೆ ಕೋವಿಡ್ ಸೋಂಕು ಉಂಟಾಗಿತ್ತು. ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಮೇ ನಾಲ್ಕರಂದು ಅಮಿತ್ ಮಿಶ್ರಾ ಅವರಿಗೆ ಕೋವಿಡ್ ಇರುವುದು ಗೊತ್ತಾಗಿತ್ತು. ಮೇ ಎಂಟರಂದು ಪ್ರಸಿದ್ಧ ಕೃಷ್ಣ ಅವರ ವರದಿ ಪಾಸಿಟಿವ್ ಬಂದಿತ್ತು. ಪ್ರಸಿದ್ಧ ಗುಣಮುಖರಾಗಿದ್ದಾರೆ ಎಂದು ಸುದ್ದಿಸಂಸ್ಥೆಗೆ ಬಿಸಿಸಿಐ ತಿಳಿಸಿದ್ದು ಮಿಶ್ರಾ ಟ್ವಿಟರ್‌ನಲ್ಲಿ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ‘ಆರೋಗ್ಯ ಕಾರ್ಯಕರ್ತರು ನಿಜವಾದ ಹೀರೊಗಳು. ಇಷ್ಟು ದಿನ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಅವರಿಗೆ ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದರೂ ಸಾಲದು’ ಎಂದು ಅವರು ಬರೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.