ಅವಾಚ್ಯ ಪದಗಳಿಂದ ನಿಂದನೆ: ತಮೀಮ್‌ಗೆ ದಂಡ ದುಬೈ: ಅವಾಚ್ಯ ಪದಗಳನ್ನು ಬಳಸಿದ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಪಂದ್ಯಶುಲ್ಕದ 15 ಶೇಕಡಾ ಮೊತ್ತವನ್ನು ಕಳೆದುಕೊಳ್ಳಲಿದ್ದಾರೆ. ವಿಶ್ವಕಪ್ ಸೂಪರ್ ಲೀಗ್ ಸರಣಿಯ ಅಂಗವಾಗಿ ಶ್ರೀಲಂಕಾ ವಿರುದ್ಧ ಢಾಕಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅವರು ಅಶಿಸ್ತು ತೋರಿದ್ದರು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಿಳಿಸಿದೆ. ಐಸಿಸಿ ನಿಯಮಾವಳಿಯ ಕಾಯ್ದೆ 2.3ರ ಅನ್ವಯ ತಮೀಮ್ ಇಕ್ಬಾಲ್ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ದಂಡದೊಂದಿಗೆ ಒಂದು ಡಿಮರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಶುಕ್ರವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದ ಬಾಂಗ್ಲಾದೇಶ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಅವರು ಕೀಪರ್‌ಗೆ ಕ್ಯಾಚ್ ನೀಡಿ ಔಟಾಗಿದ್ದರು. ತೀರ್ಪು ಮರುಪರಿಶೀಲನೆ ಮಾಡಿದರೂ ಶ್ರೀಲಂಕಾ ಪರವಾಗಿ ತೀರ್ಪು ಬಂದಿತ್ತು. ಕ್ರೀಸ್ ಬಿಡುವ ಮುನ್ನ ತಮೀಮ್ ಅಸಾಂವಿಧಾನಿಕ ಪದ ಬಳಸಿದ್ದರು. ಪಂದ್ಯದ ರೆಫರಿ ನೀಯಮುರ್ ರಶೀದ್ ಅವರು ನೀಡಿರುವ ತೀರ್ಪನ್ನು ತಮೀಮ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ವಿಚಾರಣೆ ಇರುವುದಿಲ್ಲ. ಅಂಪೈರ್‌ಗಳಾಗಿದ್ದ ಶರ್ಫದೌಲಾ ಇಬ್ನೆ ಶಹೀದ್ ಮತ್ತು ತನ್ವೀರ್ ಅಹಮ್ಮದ್, ಮೂರನೇ ಅಂಪೈರ್ ಗಾಜಿ ಸೊಹೇಲ್‌, ಪಂದ್ಯದ ಅಧಿಕಾರಿ ಮಸುದುರ್ ರಹಮಾನ್ ಅವರೂ ತೀರ್ಪಿಗೆ ಸಹಮತ ಸೂಚಿಸಿದ್ದಾರೆ. ಇದನ್ನೂ ಓದಿ.. ಡಬ್ಲ್ಯುಟಿಸಿ ಫೈನಲ್‌ಗೆ ಮೊದಲು ಭಾರತ ತಂಡಕ್ಕೆ ‘ವ್ಯವಸ್ಥಿತ ಪ್ರತ್ಯೇಕವಾಸ’: ಐಸಿಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.