| ಸಂಕಷ್ಟದಲ್ಲಿ ಭಾರತ: ಭೋಜನಾ ವಿರಾಮಕ್ಕೆ 5 ವಿಕೆಟ್‌ ಪತನ ಸೌತಂಪ್ಟನ್‌: ಐತಿಹಾಸಿಕ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌‌ ಪಂದ್ಯದ ಕೊನೆಯ ದಿನದಾಟದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಮಳೆ ಬಿಡುವು ನೀಡಿದ ಪರಿಣಾಮ ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಯಿತು. 5ನೇ ದಿನದಾಟದ ಅಂತ್ಯಕ್ಕೆ2 ವಿಕೆಟ್‌ ಕಳೆದುಕೊಂಡಿದ್ದ ಭಾರತ 6ನೇ ದಿನದ ಆರಂಭದಲ್ಲಿಕೊಹ್ಲಿ ಹಾಗೂ ಪೂಜಾರ ವಿಕೆಟ್ ಕಳೆದುಕೊಂಡಿತು. ಉತ್ತಮ ಲಯ ಕಂಡುಕೊಂಡಿದ್ದ ರಹಾನೆ ಕೂಡ ರನ್‌ ಹೊಡೆಯುವ ಭರದಲ್ಲಿ ಕೀಪರ್‌ಗೆ ಕ್ಯಾಚ್‌ ಕೊಟ್ಟು ನಿರ್ಗಮಿಸಿದರು. ನಂತರ ರಿಷಬ್‌ ಪಂತ್‌ ಜತೆಗೂಡಿದ ರವೀಂದ್ರ ಜಡೇಜಾ ತಂಡಕ್ಕೆ ಆಸರೆಯಾಗಿದ್ದಾರೆ. ಭೋಜನಾ ವಿರಾಮದ ವೇಳೆಗೆ ಭಾರತ ತಂಡ 130 ರನ್‌ಗಳಿಸಿ 5 ವಿಕೆಟ್‌ ಕಳೆದುಕೊಂಡಿದ್ದು 98 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ನ್ಯೂಜಿಲೆಂಡ್‌ ಪರ ಕೈಲ್‌ ಜೆಮಿಸನ್‌ ಭಾರತದ ಪ್ರಮುಖ ವಿಕೆಟ್‌ಗಳನ್ನು ಕಿತ್ತರು. ಜೆಮಿಸನ್‌ ಹಾಗೂ ಸೌಥಿ ತಲಾ 2 ವಿಕೆಟ್‌ ಪಡೆದರು. ಭಾರತದ ವಿರುದ್ಧ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್‌ಗಳನ್ನು ಕಲೆಹಾಕಿದ್ದು, ಅಲ್ಪ ಮುನ್ನಡೆ ಸಾಧಿಸಿದೆ. 5ನೇ ದಿನದಾಟದಂದು ಬ್ಯಾಟಿಂಗ್‌ ಮುಂದುವರಿಸಿದ ಕಿವೀಸ್‌ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 32 ರನ್‌ಗಳ ಮುನ್ನಡೆ ಸಾಧಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮೊಹಮ್ಮದ್‌ ಶಮಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕಿವೀಸ್‌ ಬ್ಯಾಟಿಂಗ್‌ ಪಕ್ಕೆಲುಬನ್ನು ಮುರಿದರು. 8 ಮೇಡನ್‍‌ ಒಳಗೊಂಡು 76 ರನ್‌ ಗಳನ್ನು ನೀಡಿ 4 ವಿಕೆಟ್‌ ಕಬಳಿಸಿದರು. ಸಂಕ್ಷಿಪ್ತ ಸ್ಕೋರ್‌ ಭಾರತ ಮೊದಲ ಇನ್ನಿಂಗ್ಸ್‌: 217 ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌: 249 ಭಾರತ ಎರಡನೇ ಇನ್ನಿಂಗ್ಸ್‌: 130/5( ಪಂದ್ಯ ಪ್ರಗತಿಯಲ್ಲಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.