ರೈತನ ಪುತ್ರಿಯ ವೈದ್ಯಕೀಯ ಶಿಕ್ಷಣಕ್ಕೆ ಸಚಿನ್‌ ನೆರವು ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮಾನವೀಯ ಕಾರ್ಯದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಡ ರೈತನ ಪುತ್ರಿಯೊಬ್ಬರ ವೈದ್ಯಕೀಯ ಪದವಿ ಓದಿಗೆ ತಮ್ಮ ಫೌಂಡೇಷನ್‌ನಿಂದ ನೆರವು ನೀಡಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜಾಯರೆ ಗ್ರಾಮದ ದೀಪ್ತಿ ವಿಶ್ವಾಸರಾವ್, ತೆಂಡೂಲ್ಕರ್ ಫೌಂಡೇಷನ್‌ನಿಂದ ಶಿಷ್ಯವೇತನ ಪಡೆದವರು. ಸದ್ಯ ತನ್ನ ಹಳ್ಳಿಯಿಂದ ಮೊದಲ ವೈದ್ಯೆಯಾಗುವ ಹಾದಿಯಲ್ಲಿದ್ದಾರೆ ದೀಪ್ತಿ. ಸೇವಾ ಸಹಯೋಗ್ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆಯು ಟ್ವಿಟರ್‌ನಲ್ಲಿ ಈ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಸಚಿನ್ ಅವರಿಗೆ ಕೃತಜ್ಞತೆ ತಿಳಿಸಿದೆ. ‘ಅಕೋಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸದ್ಯ ನಾನು ಎಂಬಿಬಿಎಸ್‌ ಓದುತ್ತಿದ್ದೇನೆ. ಪರಿಶ್ರಮದಿಂದ ಯಶಸ್ಸು ಸಾಧ್ಯವೆಂದು ಹೇಳುತ್ತಾರೆ. ನನ್ನ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಶಿಷ್ಯವೇತನ ನೀಡಿದ ಸಚಿನ್ ತೆಂಡೂಲ್ಕರ್ ಫೌಂಡೇಷನ್‌ಗೆ ಧನ್ಯವಾದಗಳು‘ ಎಂದು ದೀಪ್ತಿ ಹೇಳಿದ್ದಾರೆ. ‘ಕನಸುಗಳನ್ನು ಬೆಂಬತ್ತಿ ಅವುಗಳನ್ನು ಕನಸು ಮಾಡಿಕೊಳ್ಳುವುದಕ್ಕೆ ದೀಪ್ತಿಯ ಯಶಸ್ಸು ಒಂದು ಉದಾಹರಣೆ. ಅವರ ಕಥೆಯು ಇತರರಿಗೆ ಪ್ರೇರಣೆಯಾಗಿದೆ. ದೀಪ್ತಿ ಅವರಿಗೆ ನನ್ನ ಶುಭ ಹಾರೈಕೆಗಳು‘ ಎಂದು ಸಚಿನ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.