ಬಂಗಾಳ ತಂಡಕ್ಕೆ ಅನುಸ್ಟುಪ್‌ ಮಜುಂದಾರ್ ನಾಯಕ ಕೋಲ್ಕತ್ತ: ಅನುಭವಿ ಬ್ಯಾಟ್ಸ್‌ಮನ್‌ ಅನುಸ್ಟುಪ್ ಮಜುಂದಾರ್ ಅವರು ಸೈಯದ್‌ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಬಂಗಾಳ ತಂಡವನ್ನು ಮುನ್ನಡೆಸಲಿದ್ದಾರೆ. ಅಭಿಮನ್ಯು ಈಶ್ವರನ್ ಬದಲಿಗೆ ಅನುಸ್ಟುಪ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರ ಕಿರಿಯ ಸಹೋದರ ಮೊಹಮ್ಮದ್ ಕೈಫ್ ಕೂಡ ತಂಡದಲ್ಲಿದ್ದು, ಶ್ರೀವತ್ಸ ಗೋಸ್ವಾಮಿ ಉಪನಾಯಕರಾಗಿದ್ದಾರೆ. ಮೊಹಮ್ಮದ್ ಕೈಫ್ ಬೌಲಿಂಗ್ ಆಲ್‌ರೌಂಡರ್ ಆಗಿದ್ದಾರೆ. ಅನುಸ್ಟುಪ್ ಅವರು ಕಳೆದ ಋತುವಿನಲ್ಲಿ ತಂಡದ ಪರ ಅತ್ಯುತ್ತಮ ಸಾಮರ್ಥ್ಯ ತೋರಿದ್ದರು. ‘ಅಭಿಮನ್ಯು ಈಶ್ವರನ್ ಅವರ ‘ನಾಯಕತ್ವದ ಹೊರೆ‘ ಕಡಿಮೆ ಮಾಡಲು 36 ವರ್ಷದ ಅನುಸ್ಟುಪ್ ಅವರಿಗೆ ಮುಷ್ತಾಕ್ ಅಲಿ ಟಿ–20 ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ನೀಡಲಾಗಿದೆ‘ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಹೇಳಿದೆ. ಈಶ್ವರನ್ ಅವರು ಲಯ ಕಳೆದುಕೊಂಡಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಬಂಗಾಳ ತಂಡ ಇಂತಿದೆ: ಅನುಸ್ಟುಪ್‌ ಮಜುಂದಾರ್‌ (ನಾಯಕ), ಶ್ರೀವತ್ಸ ಗೋಸ್ವಾಮಿ (ಉಪನಾಯಕ), ಅಭಿಮನ್ಯು ಈಶ್ವರನ್, ಮನೋಜ್ ತಿವಾರಿ, ಸುದಿ ಚಟರ್ಜಿ, ಇಶಾನ್ ಪೊರೆಲ್‌, ಋತ್ವಿಕ್ ರಾಯ್‌ ಚೌಧರಿ, ವಿವೇಕ್‌ ಸಿಂಗ್‌, ಶಹಬಾಜ್ ಅಹಮದ್‌, ಅರ್ನಬ್‌ ನಂದಿ, ಮುಕೇಶ್‌ ಕುಮಾರ್, ಆಕಾಶ ದೀಪ್‌ ಅಭಿಷೇಕ್ ದಾಸ್‌, ಮೊಹಮ್ಮದ್‌ ಕೈಫ್, ಅರಿತ್ರಾ ಚಟರ್ಜಿ, ಶುಭಂಕರ್ ಬಾಲ್, ರಿತ್ತಿಕ್ ಚಟರ್ಜಿ, ಪ್ರಯಾಸ್ ರಾಯ್ ಬರ್ಮನ್‌, ಕೈಫ್ ಅಹಮದ್‌ ಮತ್ತು ರವಿಕಾಂತ್ ಸಿಂಗ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.