ಟಿ ನಟರಾಜನ್‌ಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ: ಮೆರವಣಿಗೆ ಮಾಡಿ ಸಂಭ್ರಮ ಚೆನ್ನೈ: ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಸ್ವದೇಶಕ್ಕೆ ಮರಳುತ್ತಿದೆ. ಗುರುವಾರ ಕ್ರಿಕೆಟಿಗರು ಮರಳಿ ಭಾರತಕ್ಕೆ ಬಂದಿದ್ದು, ಎಲ್ಲೆಡೆ ಪ್ರಶಂಸೆಗಳ ಸುರಿಮಳೆ ಜತೆಗೆ ಅದ್ಧೂರಿ ಸ್ವಾಗತ ದೊರೆತಿದೆ. ಟೀಮ್ ಇಂಡಿಯಾದ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಟಿ ನಟರಾಜನ್ ಕೂಡ ಗುರುವಾರ ಹುಟ್ಟೂರಿಗೆ ಆಗಮಿಸಿದಾಗ ಅದ್ಧೂರಿ ಸ್ವಾಗತ ದೊರೆತಿದೆ. ಅಲಂಕೃತ ಕುದುರೆಗಾಡಿಯಲ್ಲಿ ರಥದಂತೆ ಶೃಂಗರಿಸಲ್ಪಟ್ಟ ಆಸನದಲ್ಲಿ ಟಿ ನಟರಾಜನ್‌ರನ್ನು ಕುಳ್ಳಿರಿಸಿ ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಬರಮಾಡಿಕೊಂಡಿದ್ದಾರೆ. ಜತೆಗೆ ಹಾರ ಹಾಕಿ ಅಭಿನಂದನೆ ಸಲ್ಲಿಸಿ ಖುಷಿಪಟ್ಟಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಅಂತಿಮ ಮತ್ತು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಭೂತಪೂರ್ವ ಜಯ ಗಳಿಸಿತ್ತು. ಟಿ. ನಟರಾಜನ್‌ಗೆ ಹುಟ್ಟೂರಾದ ತಮಿಳುನಾಡಿದ ಸೇಲಂ ಜಿಲ್ಲೆಯ ಚಿನ್ನಂಪಟ್ಟಿ ಗ್ರಾಮದಲ್ಲಿ ದೊರೆತ ವಿಶೇಷ ಸ್ವಾಗತದ ವಿಡಿಯೋ ತುಣುಕನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು, ಇಲ್ಲಿ ಕ್ರಿಕೆಟ್ ಎನ್ನುವುದು ಕೇವಲ ಒಂದು ಆಟವಲ್ಲ, ಅದಕ್ಕೂ ಮಿಗಿಲಾದುದು ಎಂದು ಬರೆದುಕೊಂಡಿದ್ದಾರೆ. (@) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.