ಐಪಿಎಲ್‌ಗೆ ಸುಂದರ್‌ ಅಲಭ್ಯ: ಟಿ–20 ವಿಶ್ವಕಪ್‌ಗೂ ಸಂದೇಹ ನವದೆಹಲಿ: ಬೆರಳಿನ ಗಾಯ ಸಂಪೂರ್ಣ ವಾಸಿಯಾಗದ ಕಾರಣ ವಾಷಿಂಗ್ಟನ್ ಸುಂದರ್‌ ಅವರು ಯುಎಇಯಲ್ಲಿ ನಿಗದಿಯಾಗಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆದ ಫಿಟ್‌ನೆಸ್ ಪರೀಕ್ಷೆಯಲ್ಲಿ ಅವರು ವಿಫಲರಾಗಿದ್ದು, ಟಿ–20 ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗುವುದೂ ಸಂದೇಹವಾಗಿದೆ. ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಆಡುವ ಆಲ್‌ರೌಂಡರ್‌ ಸುಂದರ್‌, ಭಾರತ ಕ್ರಿಕೆಟ್‌ ತಂಡದೊಂದಿಗೆ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅಭ್ಯಾಸ ಪಂದ್ಯವೊಂದನ್ನು ಆಡುವ ವೇಳೆ ಮೊಹಮ್ಮದ್ ಸಿರಾಜ್ ಅವರ ಎಸೆತದಲ್ಲಿ ಗಾಯಗೊಂಡಿದ್ದರು. ಸೆಪ್ಟೆಂಬರ್ 19ರಿಂದ ಐಪಿಎಲ್ ನಡೆಯಲಿದೆ. ‘ನಮ್ಮ ತಂಡದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್‌ ಬೆರಳಿನ ಗಾಯದ ಕಾರಣ ಐಪಿಎಲ್‌ನ ಮುಂದುವರಿದ ಟೂರ್ನಿಯಲ್ಲಿ ಆಡುತ್ತಿಲ್ಲ‘ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದೆ. ಸುಂದರ್ ಬದಲಿಗೆ ಬಂಗಾಳದ ಆಕಾಶದೀಪ್ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.