2022: ಆರ್‌ಸಿಬಿಗೆ ರಾಜಸ್ಥಾನ್ ಸವಾಲು; ಕೊಹ್ಲಿಯನ್ನು ಕೈಬಿಡಬೇಕೇ? ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಆರಂಭಿಕ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಉತ್ತಮ ಲಯದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಕಾಏಕಿ ದಿಢೀರ್ ಪತನ ಕಂಡಿದೆ. ಏಪ್ರಿಲ್ 23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 68 ರನ್ನಿಗೆ ಆಲೌಟ್ ಆಗುವ ಮೂಲಕ ಸೋಲಿನ ಆಘಾತ ಎದುರಿಸಿದೆ. ಇದನ್ನೂ ಓದಿ: 2022 : ಪಂಜಾಬ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲು ಆರ್‌ಸಿಬಿ ಆದಷ್ಟು ಬೇಗನೇ ಚೇತರಿಸಿಕೊಳ್ಳುವುದು ಅತಿ ಮುಖ್ಯವೆನಿಸಿದೆ. ಏಪ್ರಿಲ್ 26 ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸವಾಲನ್ನು ಎದುರಿಸಲಿದೆ. ಅಮೋಘ ಲಯದಲ್ಲಿರುವ ರಾಜಸ್ಥಾನ್ ತಂಡದ ಸವಾಲನ್ನು ಮೀರಿ ನಿಲ್ಲಲು ಆರ್‌ಸಿಬಿ ಪಂದ್ಯದ ಎಲ್ಲ ವಿಭಾಗದಲ್ಲೂ ಮೇಲುಗೈ ಸಾಧಿಸಬೇಕಿದೆ. ಕೊಹ್ಲಿಯನ್ನು ಕೈಬಿಡಬೇಕೇ? ಸತತ ಎರಡು ಪಂದ್ಯಗಳಲ್ಲಿ ಸೊನ್ನೆಗೆ ಔಟ್ ಆಗಿರುವ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕೈಬಿಡಬೇಕೇ ಎಂಬ ಪ್ರಶ್ನೆ ಉದ್ಘವಿಸಿದೆ. ಸತತ ವೈಫಲ್ಯ ಎದುರಿಸುತ್ತಿರುವ ಕೊಹ್ಲಿಗೆ ವಿಶ್ರಾಂತಿ ಸೂಚಿಸಬೇಕು ಎಂಬುದು ಮಾಜಿ ಕ್ರಿಕೆಟಿಗರ ಸಲಹೆಯಾಗಿದೆ. ಆದರೆ ಕೊಹ್ಲಿಯನ್ನು ಕೈಬಿಟ್ಟರೆ ತಂಡದ ಮನೋಬಲ ಕುಸಿಯುವ ಭೀತಿಯಿದೆ. ಮೈಕ್ ಹೆಸ್ಸನ್ ಹೇಳಿದ್ದೇನು? ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಂದ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ದಾಖಲಾಗಿಲ್ಲ. ಆದರೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಗುಣಮಟ್ಟದ ಆಟಗಾರರು ಅಗ್ರ ಕ್ರಮಾಂಕದಲ್ಲಿದ್ದಾರೆ. ಕೆಲವರು ಉತ್ತಮ ಪ್ರದರ್ಶನ ನೀಡಿದಾಗ ಇನ್ನು ಕೆಲವರು ಹಿನ್ನಡೆ ಅನುಭವಿಸಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಇದು ಸಾಮಾನ್ಯ ಎಂದು ಆರ್‌ಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸ್ಸನ್ ಹೇಳಿದ್ದಾರೆ. ಅಗ್ರ ಕ್ರಮಾಂಕ ವೈಫಲ್ಯ ಕಂಡಾಗ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಯೋಜನೆಗಳು ವೈಫಲ್ಯ ಕಂಡಿದ್ದವು. ಆದರೆ ಈ ಕುರಿತು ಹೆಚ್ಚು ಚಿಂತಿತರಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.