2019 ವಿಶ್ವಕಪ್‌ಗೆ ಸರಿಯಾದ ಪೂರ್ವಸಿದ್ಧತೆ ಇರಲಿಲ್ಲ: ಯುವರಾಜ್ ಮುಂಬೈ: 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ತಂಡದ ವಿಶ್ವಕಪ್ ಪ್ರಶಸ್ತಿ ಕನಸು ಭಗ್ನಗೊಂಡಿತ್ತು. ಆದರೆ ಟೀಮ್ ಇಂಡಿಯಾ ಅಂದು ಸರಿಯಾದ ಪೂರ್ವಸಿದ್ಧತೆ ಕೈಗೊಂಡಿರಲಿಲ್ಲ ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಆರೋಪಿಸಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಭಾರತಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಅನುಭವಿ ಬ್ಯಾಟರ್‌ನ ಕೊರತೆ ಕಾಡಿತ್ತು ಎಂದು ಯುವಿ ಹೇಳಿದರು. ಸ್ಪೋರ್ಟ್ಸ್18 'ಹೋಮ್ ಆಫ್ ಹೀರೊಸ್' ಕಾರ್ಯಕ್ರಮದಲ್ಲಿ ಯುವಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಯಾರೂ ನನ್ನನ್ನು ಬೆಂಬಲಿಸಲಿಲ್ಲ: ಆರ್‌ಸಿಬಿ ನಿಷ್ಠೆ ಬಹಿರಂಗಪಡಿಸಿದ ಕೊಹ್ಲಿ ಕೆ.ಎಲ್. ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ ಶಿಖರ್ ಧವನ್ ಗಾಯಗೊಂಡ ಪರಿಣಾಮ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. ಬಳಿಕ ಧವನ್ ಸ್ಥಾನಕ್ಕೆ ವಿಜಯ್ ಶಂಕರ್ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಆರಿಸಲಾಗಿತ್ತು. ದುರದೃಷ್ಟವಶಾತ್ ಶಂಕರ್ ಕೂಡ ಗಾಯಗೊಂಡ ಪರಿಣಾಮ ರಿಷಭ್ ಪಂತ್ ಆಯ್ಕೆಯಾಗಿದ್ದರು. '2011ರಲ್ಲಿ ನಾವು ವಿಶ್ವಕಪ್ ಗೆದ್ದಾಗ ಅನುಭವಿ ಆಟಗಾರರು ತಂಡದಲ್ಲಿದ್ದರು. ನನಗನಿಸುತ್ತದೆ 2019ರಲ್ಲಿ ಸರಿಯಾದ ಯೋಜನೆ ಇರಲಿಲ್ಲ. 5-7 ಪಂದ್ಯ ಅನುಭವ ಹೊಂದಿದ್ದ ಶಂಕರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಬಳಿಕ ಅವರ ಸ್ಥಾನಕ್ಕೆ ನಾಲ್ಕು ಪಂದ್ಯಗಳನ್ನಷ್ಟೇ ಆಡಿದ್ದ ಪಂತ್ ಆಯ್ಕೆಯಾಗಿದ್ದರು. 2003ರಲ್ಲಿ ನಾವು ವಿಶ್ವಕಪ್ ಆಡಿದ್ದಾಗ ಮೊಹಮ್ಮದ್ ಕೈಫ್, ದಿನೇಶ್ ಮೊಂಗಿಯಾ ಹಾಗೂ ನಾನು 50ರಷ್ಟು ಪಂದ್ಯಗಳನ್ನು ಆಡಿದ್ದೆವು' ಎಂದು ಹೇಳಿದ್ದಾರೆ. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ಯುವರಾಜ್ ಸಿಂಗ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.