ಬಂಗಾಳ ಕ್ರಿಕೆಟ್‌ ಸಂಸ್ಥೆಯೊಂದಿಗೆ ಮುನಿಸಿಕೊಂಡ ಸಹಾ ತ್ರಿಪುರಾ ತಂಡದತ್ತ ಚಿತ್ತ ಕೋಲ್ಕತ್ತ: ಬಂಗಾಳ ಕ್ರಿಕೆಟ್‌ ಸಂಸ್ಥೆಯೊಂದಿಗೆ (ಸಿಎಬಿ) ಮುನಿಸಿಕೊಂಡಿರುವ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ್‌ ಸಹಾ ಅವರು ತ್ರಿಪುರಾ ರಾಜ್ಯದ ಪರ ಆಡಲು ತಯಾರಿ ನಡೆಸಿದ್ದಾರೆ. ‘ತ್ರಿಪುರಾ ತಂಡದ ಆಟಗಾರನಾಗುವ ಜತೆಯಲ್ಲಿ ಸಲಹೆಗಾರನ ಜವಾಬ್ದಾರಿಯನ್ನೂ ನಿರ್ವಹಿಸಲು ಅವರು ಬಯಸಿದ್ದಾರೆ. ಈ ಸಂಬಂಧ ಈಗಾಗಲೇ ತ್ರಿಪುರಾ ಕ್ರಿಕೆಟ್‌ ಸಂಸ್ಥೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ತ್ರಿಪುರಾ ತಂಡ ಸೇರಬೇಕಾದರೆ ಅವರಿಗೆ ಮೊದಲು ಸಿಎಬಿ ಹಾಗೂ ಬಿಸಿಸಿಐನಿಂದ ನಿರಾಕ್ಷೇಪಣಾ ಪತ್ರ ಸಿಗಬೇಕಿದೆ. ಆ ಬಳಿಕವೇ ಮುಂದಿನ ಹೆಜ್ಜೆ ಇಡಲು ಸಾಧ್ಯ‘ ಎಂದಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಸಹಾ ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. 37 ವರ್ಷದ ಸಹಾ, ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅವರು ಇತ್ತೀಚೆಗೆ ಬಂಗಾಳ ತಂಡದಿಂದಲೂ ದೂರವಾಗಿದ್ದರು. ಸಿಎಬಿ ಜಂಟಿ ಕಾರ್ಯದರ್ಶಿ ದೇವವ್ರತ ದಾಸ್‌ ಅವರು ಸಹಾ ನಿರ್ಧಾರವನ್ನು ಟೀಕಿಸಿದ್ದರಲ್ಲದೆ, ಅವರ ಬದ್ಧತೆಯನ್ನು ಪ್ರಶ್ನಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸಹಾ, ಇನ್ನು ಮುಂದೆ ಬಂಗಾಳ ತಂಡದ ಪರ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. 2007 ರಲ್ಲಿ ಬಂಗಾಳ ಪರ ಪದಾರ್ಪಣೆ ಮಾಡಿದ್ದ ಅವರು 122 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.