ನನ್ನ ವೃತ್ತಿ ಜೀವನದಲ್ಲಿ ಆರ್‌ಸಿಬಿ ಅಭಿಮಾನಿಗಳ ಪಾತ್ರ ಮಹತ್ತರ: ವಿರಾಟ್ ಕೊಹ್ಲಿ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿಷ್ಠಾವಂತ ಅಭಿಮಾನಿಗಳು ತಮ್ಮ ವೃತ್ತಿ ಜೀವನದಲ್ಲಿ ಬೀರಿರುವ ಪ್ರಭಾವ ಮಹತ್ತರವಾದುದು ಬಗ್ಗೆ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಆರ್‌ಸಿಬಿ ಅಭಿಮಾನಿಗಳಿಂದಾಗಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಅಲ್ಲದೆ ಆರ್‌ಸಿಬಿ ಅಭಿಮಾನಿಗಳನ್ನು '12TH ' (12ನೇ ಆಟಗಾರ) ಎಂದು ಕರೆದಿದ್ದಾರೆ. 'ಆರ್‌ಸಿಬಿ ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಪ್ರಭಾವ ಮತ್ತು ಕೊಡುಗೆಯನ್ನು ಮನಗಂಡಿದ್ದೇನೆ. ಇದು ಪ್ರಾಮಾಣಿಕ ಭಾವನೆ. ನಾನು ಹಾಗೂ ಅನುಷ್ಕಾ ಈ ಬಗ್ಗೆ ಮಾತನಾಡಿದ್ದೇವೆ. ಆಕೆ ಕೂಡ ನನ್ನ ಜೀವನದಲ್ಲಿ ಅಭಿಮಾನಿಗಳು ಬೀರಿರುವ ಪಾತ್ರವನ್ನು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಾರೆ' ಎಂದು ವಿರಾಟ್ ವಿವರಿಸಿದ್ದಾರೆ. ಈಗ ಹಿಂತಿರುಗಿ ನೋಡಿದಾಗ, ಅಭಿಮಾನಿಗಳ ಬೆಂಬಲದಿಂದಲೇ ಕಠಿಣ ಪರಿಸ್ಥಿತಿಯಲ್ಲೂ ಏನೂ ಬೇಕಾದರೂ ಮಾಡಲು ಸಾಧ್ಯ ಎಂಬ ಧೈರ್ಯ ಮೂಡಿದೆ. ಅವರು (ಅಭಿಮಾನಿಗಳು) ನನ್ನಲ್ಲಿ ನಂಬಿಕೆಯನ್ನಿರಿಸಿದ್ದಾರೆ. ಅದಕ್ಕಾಗಿ ಕೃತಜ್ಞನಾಗಿದ್ದೇನೆ. ಈಗ ಸ್ಟೇಡಿಯಂಗೆ ಅಭಿಮಾನಿಗಳು ಮರಳುತ್ತಿರುವುದರಿಂದ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ. ಅಭಿಮಾನಿಗಳು ಇಲ್ಲದಿರುತ್ತಿದ್ದರೆ ಅಲ್ಲಿ ಯಾವುದೇ ವಿನೋದ ಇರುವುದಿಲ್ಲ. ನನ್ನ ಪಾಲಿಗೆ ಕ್ರೀಡೆಯು ಅಭಿಮಾನಿಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲೂ ಅಭಿಮಾನಿಗಳು ಆರ್‌ಸಿಬಿ-ಆರ್‌ಸಿಬಿ ಎಂದು ಜೈಕಾರ ಕೂಗುತ್ತಿದ್ದರು. ಇದು ನನಗೆ 2016ರ ಸೀಸನ್ ಅಥವಾ ಫೈನಲ್ ಎಂಬಂತೆ ಭಾಸವಾಗುತ್ತಿತ್ತು. ಈ ಎಲ್ಲ ನೆನಪುಗಳು ಭಾವುಕರಾಗುವಂತೆ ಮಾಡಿತು. ನನ್ನೆಲ್ಲ ಆಟದ ಅದ್ಭುತ ಕ್ಷಣಗಳ ಬಗ್ಗೆ ಮೆಲುಕು ಹಾಕಲು ಸಾಧ್ಯವಾಯಿತು ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.