ಅಭ್ಯಾಸ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದರೆ ಮಾತ್ರ ಪಾಂಡ್ಯಗೆ ಅವಕಾಶ ನೀಡಿ: ಗಂಭೀರ್ ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿನಡೆಯಲಿರುವ ಅಭ್ಯಾಸ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದರೆ ಮಾತ್ರ ಹಾರ್ದಿಕ್ ಪಾಂಡ್ಯ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಪರಿಗಣಿಸಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ, ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದರೂ ಬೌಲಿಂಗ್ ಮಾಡಿರಲಿಲ್ಲ. ಈಗ ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡುವರೇ ಎಂಬುದು ಅನುಮಾನವೆನಿಸಿದೆ. ಓರ್ವ ಪರಿಪೂರ್ಣ ಆಲ್‌ರೌಂಡರ್ ಆಗಿ ಪಾಂಡ್ಯ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದನ್ನೇ ಗೌತಮ್ ಗಂಭೀರ್ ಬೊಟ್ಟು ಮಾಡಿದ್ದಾರೆ. ಇದನ್ನು ಮನಗಂಡಿರುವ ಆಯ್ಕೆ ಸಮಿತಿಯು ಕೂಡ ಕೊನೆಯ ಹಂತದಲ್ಲಿ ಅಕ್ಷರ್ ಪಟೇಲ್ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಮಧ್ಯಮ ಗತಿಯ ವೇಗದ ಬೌಲರ್‌ನ ಕೊರತೆಯನ್ನು ತುಂಬುವ ಪ್ರಯತ್ನ ಮಾಡಿದೆ. 'ಹಾರ್ದಿಕ್ ಪಾಂಡ್ಯ ನೆಟ್ಸ್‌ನಲ್ಲಿಮಾತ್ರವಲ್ಲದೆ ಎರಡು ಅಭ್ಯಾಸ ಪಂದ್ಯಗಳಲ್ಲಿ ಸರಿಯಾಗಿ ಬೌಲಿಂಗ್ ಮಾಡಿದರೆ ಮಾತ್ರ ಪ್ಲೇಯಿಂಗ್ ಇಲೆವೆನ್‌ಗೆ ಪ್ರವೇಶಿಸಬೇಕು. ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವುದಕ್ಕೂ ವಿಶ್ವಕಪ್‌ನಲ್ಲಿ ಬಾಬರ್ ಆಜಂ ಅವರಂತಹ ಗುಣಮಟ್ಟದ ಬ್ಯಾಟರ್‌ಗಳ ವಿರುದ್ಧ ಬೌಲಿಂಗ್ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ' ಎಂದು ಹೇಳಿದರು. 'ಹಾರ್ದಿಕ್ ಪಾಂಡ್ಯ ಅಭ್ಯಾಸ ಪಂದ್ಯ ಹಾಗೂ ನೆಟ್ಸ್‌ನಲ್ಲಿ ಶೇಕಡಾ 100ರಷ್ಟು ಬೌಲಿಂಗ್ ಮಾಡಬೇಕು. ಗಂಟೆಗೆ 115-120 ಕಿ.ಮೀ. ವೇಗದಲ್ಲಿ ಮಾತ್ರ ಬೌಲಿಂಗ್ ಮಾಡಿದರೂ ಅಪಾಯವನ್ನು ಆಹ್ವಾನಿಸಲು ನಾನು ಸಿದ್ಧನಿಲ್ಲ' ಎಂದು ಗಂಭೀರ್ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ಬೆನ್ನು ನೋವು ಸೇರಿದಂತೆ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಪಾಂಡ್ಯ, ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡುವರೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.