T20 : ಭಾರತ ತಂಡದಿಂದ ಕೈಬಿಡುವಂತೆ ಗವಾಸ್ಕರ್ ಸೂಚಿಸಿದ್ದು ಯಾರನ್ನು ಗೊತ್ತಾ? ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 31ರಂದು (ಭಾನುವಾರ) ದುಬೈಯಲ್ಲಿ ನಡೆಯಲಿರುವ ಸೂಪರ್-12 ಹಂತದ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದಲ್ಲಿ ಬದಲಾವಣೆ ಮಾಡುವಂತೆ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಶಿಫಾರಸು ಮಾಡಿದ್ದಾರೆ. ಇದರಂತೆ ಆಡುವ ಹನ್ನೊಂದರ ಬಳಗದಿಂದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಕೈಬಿಡುವಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಗವಾಸ್ಕರ್ ಅವರು ಶಿಫಾರಸು ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಹಾರ್ದಿಕ್‌ ಪಾಂಡ್ಯ ಅವರಿಗೆ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ ಅವರನ್ನು ತಂಡದಿಂದ ಕೈಬಿಟ್ಟು ಇಶಾನ್‌ ಕಿಶನ್‌ಗೆ ಅವಕಾಶ ನೀಡಬೇಕು. ಜತೆಗೆ, ಪಾಕ್‌ ವಿಕೆಟ್‌ ಪಡೆಯಲು ವಿಫಲರಾದ ಭುವನೇಶ್ವರ್ ಕುಮಾರ್‌ ಅವರ ಬದಲಿಗೆ ಶಾರ್ದೂಲ್‌ ಠಾಕೂರ್ ಅವರಿಗೆ ಅವಕಾಶ ನೀಡುವಂತೆ ಗವಾಸ್ಕರ್ ಸಲಹೆ ನೀಡಿದ್ದಾರೆ. ಪಾಕ್‌ ವಿರುದ್ಧ 3 ಓವರ್‌ ಬೌಲಿಂಗ್ ಮಾಡಿದ್ದ ಭುವನೇಶ್ವರ್ 25 ರನ್‌ ನೀಡಿದ್ದರು. ಜತೆಗೆ ಕೇವಲ ಬ್ಯಾಟಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಆಡಿದ 8 ಎಸೆತಗಳಲ್ಲಿ 11 ರನ್‌ ಗಳಿಸಿದ್ದರು. ಅ.24ರಂದು ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಇದರಿಂದಾಗಿ ಟೀಕೆಗೆ ಗುರಿಯಾಗಿರುವ ಕೊಹ್ಲಿ ಪಡೆ ನ್ಯೂಜಿಲೆಂಡ್‌ ವಿರುದ್ಧ ಗೆಲುವು ಸಾಧಿಸುವ ಹಂಬಲದಲ್ಲಿದೆ. ಇದನ್ನೂ ಓದಿ... 2022: ಹರಾಜಿಗೂ ಮುನ್ನವೇ ರಾಹುಲ್‌ಗೆ ಬಿಗ್‌ ಶಾಕ್, ಫ್ರಾಂಚೈಸಿ ಹೇಳಿದ್ದೇನು? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.