2022: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಕೈಬಿಡಲಿರುವ ಮುಂಬೈ ಇಂಡಿಯನ್ಸ್? ನವದೆಹಲಿ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡವು ಈ ಬಾರಿ ಕೈಬಿಡುವ ಸಾಧ್ಯತೆ ಇದೆ. ಇದರಿಂದಾಗಿ ಪಾಂಡ್ಯ, 2022ರ ಟೂರ್ನಿಗಾಗಿ ನಡೆಯುವ ಹರಾಜಿನಲ್ಲಿ ಸ್ಪರ್ಧಿಸಬೇಕಾಗಬಹುದು. ಮುಂಬರುವ ಐಪಿಎಲ್‌ನಲ್ಲಿ ಒಟ್ಟು ಹತ್ತು ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಈಚೆಗೆ ಲಖನೌ ಮತ್ತು ಅಹಮದಾಬಾದ್ ಫ್ರ್ಯಾಂಚೈಸಿಗಳು ಸೇರ್ಪಡೆಯಾಗಿವೆ. ಅದರಿಂದಾಗಿ ಮೇಗಾ ಹರಾಜು ಪ್ರಕ್ರಿಯೆ ನಡೆಯಲಿದೆ. 2008ರಲ್ಲಿ ಐಪಿಎಲ್ ಶುರುವಾದಾಗಿನಿಂದಲೂ ಮುಂಬೈ ತಂಡವು ಇದೆ. ಈ ಬಾರಿ ತಂಡದಲ್ಲಿ ಕೆಲವು ಬದಲಾವಣೆಗಳಿಗೆ ಮುಂದಾಗುವ ಸಾಧ್ಯತೆ ಇದೆ. ‘ಬಿಸಿಸಿಐ ಒಂದೊಮ್ಮೆ ಮೂವರು ಆಟಗಾರರ ಉಳಿಸಿಕೊಳ್ಳುವ ನಿಯಮ ತಂದರೆ ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ಅವರನ್ನು ಉಳಿಸಿಕೊಳ್ಳುವುದು ಖಚಿತ. ಮೂರನೇಯವರಾಗಿ ಕೀರನ್ ಪೊಲಾರ್ಡ್ ಉಳಿಯುವರು. ಈ ಮೂವರು ತಂಡದ ಆಧಾರಸ್ತಂಭವಾಗಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:ಫಿಟ್ ಆದರೂ ಕಿವೀಸ್ ವಿರುದ್ಧ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಬೇಕೇ? ‘ಸದ್ಯದ ಪರಿಸ್ಥಿತಿಯಲ್ಲಿ ಹಾರ್ದಿಕ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಶೇ 10ರಷ್ಟು ಮಾತ್ರ ಇದೆ. ಮುಂದಿನ ಟಿ20 ಪಂದ್ಯಗಳಲ್ಲಿ ಅವರು ಉತ್ತಮವಾಗಿ ಆಡಿದರೂ ಕೂಡ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುವುದಿಲ್ಲ. ಆದರೆ ಒಂದೊಮ್ಮೆ ನಾಲ್ವರನ್ನು ಉಳಿಸಿಕೊಳ್ಳುವ ನಿಯಮ ಬಂದರೆ ಸೂರ್ಯಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ’ ಎಂದು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಹಾರ್ದಿಕ್ ಪಾಂಡ್ಯ ಪರಿಣಾಮಕಾರಿ ಆಲ್‌ರೌಂಡರ್ ಆಗಿದ್ದರು. ಮಧ್ಯಮವೇಗಿಯಾಗಿರುವ ಅವರು ಕೆಲಕಾಲದಿಂದ ಬೌಲಿಂಗ್ ಕೂಡ ಮಾಡುತ್ತಿಲ್ಲ. ಬ್ಯಾಟಿಂಗ್‌ನಲ್ಲಿಯೂ ಲಯ ಕಂಡುಕೊಂಡಿಲ್ಲ. ಆದ್ದರಿಂದ ಅವರನ್ನು ಕೈಬಿಡುವ ಯೋಚನೆಯಲ್ಲಿ ಮುಂಬೈ ತಂಡವಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ:: ಲಖನೌ, ಅಹಮದಾಬಾದ್ ಫ್ರಾಂಚೈಸಿ; ಬಿಡ್ ಗೆದ್ದ ಸಂಜೀವ್, ಸಿವಿಸಿ ಕ್ಯಾಪಿಟಲ್ ಹಾರ್ದಿಕ್ ಅಭ್ಯಾಸ: ಯುಎಇಯಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಅದಕ್ಕಾಗಿ ಅವರು ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಗುರುವಾರ ಅವರು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ ಚಿತ್ರಗಳನ್ನು ಬಿಸಿಸಿಐ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.