ಎಲ್ಲ ಮಾದರಿಯ ಕ್ರಿಕೆಟ್‌ನಿಂದಲೂ ವಿರಾಟ್ ನಾಯಕತ್ವ ತ್ಯಜಿಸಬೇಕು: ಅಫ್ರಿದಿ ಕರಾಚಿ: ಓರ್ವ ಬ್ಯಾಟರ್ ಆಗಿ ಮತ್ತಷ್ಟು ಉತ್ತುಂಗಕ್ಕೇರಲು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದಲೂ ನಾಯಕತ್ವವನ್ನು ತ್ಯಜಿಸಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ. ಖಾಸಗಿ ಚಾನೆಲ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅಫ್ರಿದಿ, ರೋಹಿತ್ ಶರ್ಮಾ ಅವರನ್ನು ಭಾರತದ ಟಿ20 ನಾಯಕರನ್ನಾಗಿ ನೇಮಕ ಮಾಡಿರುವ ಬಿಸಿಸಿಐ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ. ಟ್ವೆಂಟಿ-20 ವಿಶ್ವಕಪ್ ಬಳಿಕ ನಾಯಕತ್ವವನ್ನು ತ್ಯಜಿಸುವುದಾಗಿ ಟೂರ್ನಿ ಆರಂಭಕ್ಕೂ ಮೊದಲೇ ಕೊಹ್ಲಿ ಘೋಷಿಸಿದ್ದರು. ಕೊಹ್ಲಿ ಮುಂದಾಳತ್ವದಲ್ಲಿ ಭಾರತ ತಂಡವು ಕನಿಷ್ಠ ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಇದನ್ನೂ ಓದಿ: ಟಿ20 ಪಂದ್ಯ: ಪ್ರೇಕ್ಷಕರ ಪ್ರವೇಶಕ್ಕೆ ಕಠಿಣ ನಿರ್ಬಂಧಗಳಿಲ್ಲ 'ಭಾರತೀಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಅದ್ಭುತ ಶಕ್ತಿ. ಈಗ ಅವರು ಎಲ್ಲ ಸ್ವರೂಪಗಳಲ್ಲಿ ನಾಯಕ ಸ್ಥಾನ ತೊರೆಯಲು ನಿರ್ಧರಿಸಿದರೆ ಉತ್ತಮ ಎಂದು ನಾನು ಭಾವಿಸುತ್ತೇನೆ' ಎಂದು ಅಫ್ರಿದಿ ಹೇಳಿದ್ದಾರೆ. 'ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಯಬೇಕು ಮತ್ತು ಉಳಿದಿರುವ ಕ್ರಿಕೆಟ್ ಅನ್ನು ಆನಂದಿಸಬೇಕು. ಅವರು ಅಗ್ರ ಬ್ಯಾಟರ್ ಆಗಿದ್ದು, ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡಬಹುದಾಗಿದೆ.ಅಲ್ಲದೆ ತಮ್ಮ ಕ್ರಿಕೆಟ್ ಅನ್ನು ಇನ್ನಷ್ಟು ಆನಂದಿಸಬಹುದಾಗಿದೆ' ಎಂದು ಹೇಳಿದ್ದಾರೆ. 'ನಾನು ರೋಹಿತ್ ಶರ್ಮಾ ಅವರೊಂದಿಗೆ ಒಂದು ವರ್ಷ ಆಡಿದ್ದೇನೆ. ಅವರು ಅತ್ಯುತ್ತಮ ಮನೋಬಲ ಹೊಂದಿರುವ ಆಟಗಾರ. ತಾಳ್ಮೆಯಿಂದ ಇರುವುದು ಮತ್ತು ಅಗತ್ಯವಿದ್ದಲ್ಲಿ ಆಕ್ರಮಣಶೀಲತೆಯನ್ನು ತೋರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಲೀಗ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿಯಲ್ಲಿ ಅಫ್ರಿದಿ ಹಾಗೂ ರೋಹಿತ್ ಜೊತೆಯಾಗಿ ಆಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.