ಪ್ರಮುಖ ಪ್ರವಾಸ ಹೊಸ್ತಿಲಲ್ಲಿ ವಿವಾದ ಸಲ್ಲದು: ಕಪಿಲ್ ದೇವ್ ನವದೆಹಲಿ: ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಗಳ ಕುರಿತು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ದಕ್ಷಿಣ ಆಫ್ರಿಕಾದಂತಹ ತಂಡದ ಎದುರು ಆಡಲು ಪ್ರವಾಸಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಇಂತಹದೊಂದು ವಿವಾದಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ವಿರಾಟ್‌ಗೆ ಮತ್ತು ಬಿಸಿಸಿಐ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಇದು ಸೂಕ್ತ ಸಮಯವಾಗಿರಲಿಲ್ಲ’ ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ. ‘ಮಂಡಳಿ ಅಧ್ಯಕ್ಷ ಸ್ಥಾನವೂ ದೊಡ್ಡದು ಮತ್ತು ತಂಡದ ನಾಯಕನ ಸ್ಥಾನವೂ ದೊಡ್ಡದು. ಆದ್ದರಿಂದ ಒಬ್ಬರಿನ್ನೊಬ್ಬರತ್ತ ಸಾರ್ವಜನಿಕವಾಗಿ ಬೆರಳು ತೋರಿಸುವುದು ಸರಿಯಲ್ಲ. ಇದು ಸೌರವ್ ಮತ್ತು ಕೊಹ್ಲಿ ಅವರಿಬ್ಬರಿಗೂ ಅನ್ವಯಿಸುತ್ತದೆ. ಮುಂಬರುವ ಸರಣಿಯಲ್ಲಿ ಆಡುವ ಕುರಿತು ಆದ್ಯತೆ ನೀಡುವುದು ಒಳ್ಳೆಯದು. ಪ್ರವಾಸದ ಹೊಸ್ತಿಲಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿರುವುದು ಅಸೂಕ್ಷ್ಮ ನಡವಳಿಕೆ’ ಎಂದು ಕಪಿಲ್ ಹೇಳಿದ್ದಾರೆ. ‘ದಯವಿಟ್ಟು ನೀವು ಪರಿಸ್ಥಿತಿಯನ್ನು ನಿಯಂತ್ರಿಸಿ. ಮೊದಲು ದೇಶದ ಬಗ್ಗೆ ಯೋಚಿಸಿ. ಯಾವುದು ತಪ್ಪಿದೆಯೋ ಅದು ಇಂದಲ್ಲಾ ನಾಳೆ ಹೊರಗೆ ಬಂದೇ ಬರುತ್ತದೆ. ಆಗ ಆ ಕುರಿತು ಮಾತನಾಡಬಹುದು’ ಎಂದು ಕಪಿಲ್ ಸಲಹೆ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.