ಬಂಗಾಳ ರಣಜಿ ತಂಡಕ್ಕೆ ಕೋವಿಡ್‌ ಕಾಟ: ಏಳು ಮಂದಿಗೆ ಸೋಂಕು ಕೋಲ್ಕತ್ತ: ಬಂಗಾಳ ರಣಜಿ ಟ್ರೋಫಿ ಕ್ರಿಕೆಟ್‌ ತಂಡದ ಏಳು ಮಂದಿ ಸದಸ್ಯರಿಗೆ ಕೋವಿಡ್‌ ಖಚಿತಪಟ್ಟಿದೆ. ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ತಂಡವು ನಡೆಸುತ್ತಿರುವ ಅಭ್ಯಾಸಕ್ಕೆ ಇದರಿಂದ ಹಿನ್ನಡೆಯಾಗಿದೆ. ಬಂಗಾಳ ತಂಡವು ವಿದರ್ಭ, ರಾಜಸ್ಥಾನ, ಕೇರಳ, ಹರಿಯಾಣ ಮತ್ತು ತ್ರಿಪುರ ತಂಡಗಳಿರುವ‘ಬಿ‘ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜನವರಿ 13ರಿಂದ ಬೆಂಗಳೂರಿನಲ್ಲಿ ತ್ರಿಪುರ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದೆ. ‘ಪ್ರಸ್ತುತ ಕೋವಿಡ್‌–19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಂಸ್ಥೆಯು ಮುಂಜಾಗೃತಾ ಕ್ರಮವಾಗಿ ಕ್ರಿಕೆಟಿಗರ ಆರ್‌ಟಿ–ಪಿಸಿಆರ್‌ ಪರೀಕ್ಷೆಗಳನ್ನು ನಡೆಸಿದೆ. ಸೋಂಕು ಖಚಿತಪಟ್ಟ ಆಟಗಾರರ ಬಗ್ಗೆ ಎಲ್ಲ ರೀತಿಯ ಕಾಳಜಿ ವಹಿಸಲಾಗುವುದು‘ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಭಾನುವಾರ ಹೇಳಿದ್ದಾರೆ. ಆಟಗಾರರಾದ ಸುದೀಪ್ ಚಟರ್ಜಿ, ಅನುಸ್ಟುಪ್‌ ಮಜುಂದಾರ್‌, ಖಾಜಿ ಜುನೈದ್ ಸೈಫಿ, ಗೀತ್ ಪುರಿ, ಪ್ರದೀಪ್ತ ಪ್ರಾಮಾಣಿಕ್‌, ಸುರ್ಜೀತ್ ಯಾದವ್‌ ಹಾಗೂ ಸಹಾಯಕ ಕೋಚ್‌ ಸೌರಶಿಶ್ ಲಾಹಿರಿ ಅವರು ಕೊರೊನಾ ಸೋಂಕಿಗೆ ಒಳಗಾದವರು ಎಂದು ಮೂಲಗಳು ತಿಳಿಸಿವೆ. ಶಿವಂ, ಹಾಕ್ಲಿಗೆ ಕೋವಿಡ್‌: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಶಿವಂ ದುಬೆ ಮತ್ತು ಮುಂಬೈ ತಂಡದ ವಿಡಿಯೊ ಅನಾಲಿಸ್ಟ್ ಒಬ್ಬರಿಗೆ ಕೋವಿಡ್‌ ಖಚಿತಪಟ್ಟಿದೆ. ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲಿ ಅವರಲ್ಲಿಯೂ ಸೋಂಕು ಪತ್ತೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.