ಹುಬ್ಬಳ್ಳಿ | ಚತುಷ್ಕೋನ ಕ್ರಿಕೆಟ್‌ ಸರಣಿ: ತೇಜಲ್‌ ಚಾಂಪಿಯನ್‌ ಹುಬ್ಬಳ್ಳಿ: ಆಲ್‌ರೌಂಡ್‌ ಪ್ರದರ್ಶನ ತೋರಿದ ತೇಜಲ್‌ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ 12 ವರ್ಷದ ಒಳಗಿನವರ ಚಾಲೆಂಜರ್‌ ಟ್ರೋಫಿ ಚತುಷ್ಕೋನ ಕ್ರಿಕೆಟ್‌ ಸರಣಿಯ ಫೈನಲ್‌ನಲ್ಲಿ ಗುರುವಾರ ಏಳು ವಿಕೆಟ್‌ಗಳ ಗೆಲುವು ಸಾಧಿಸಿ ಚಾಂಪಿಯನ್‌ ಆಯಿತು. ಇಲ್ಲಿನ ಬಿ.ಜಿ. ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದುರ್ಗಾ ಅಕಾಡೆಮಿ 25 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸಿತು. ಜಾಯ್‌ ಜೆ. ಸುಳ್ಳದ (55) ತಂಡದ ಗರಿಷ್ಠ ಸ್ಕೋರರ್‌ ಎನಿಸಿದರು. ತೇಜಲ್ ತಂಡದ ಭುವನ ಜೋಶಿ (20ಕ್ಕೆ4), ಪ್ರತೀತ್‌ ಜಂಬಗಿ (16ಕ್ಕೆ2) ಚುರುಕಿನ ಬೌಲಿಂಗ್‌ ಮಾಡಿ ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಗುರಿಯನ್ನು ತೇಜಲ್‌ ತಂಡ ಕೊನೆಯ ಓವರ್‌ನ ಕೊನೆಯ ಎಸೆತ ಬಾಕಿ ಇರುವಾಗ ತಲುಪಿ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್‌ ರುಹಾನ್ ಶೇಕ್‌ (42), ರೋನಕ್‌ ಕೆ. ಪವಾರ್‌ (24) ಮತ್ತು ಪ್ರತೀತ್‌ (25) ತಂಡ ಪ್ರಶಸ್ತಿ ಜಯಿಸಲು ಪ್ರಮುಖ ಕಾರಣರಾದರು. ಸರಣಿಯಲ್ಲಿ ದುರ್ಗಾ ಅಕಾಡೆಮಿಯ ಸಂಕೇತ ರಾಠೋಡ (ಒಟ್ಟು ಹೆಚ್ಚು ರನ್‌, 111), ಇದೇ ಅಕಾಡೆಮಿಯ ಅಭಿಷೇಕ (ಹೆಚ್ಚು ವಿಕೆಟ್ ಪಡೆದ ಬೌಲರ್‌ 11) ವೈಯಕ್ತಿಕ ಗೌರವ ಪಡೆದರು. ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ ಎದುರು ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಗೆಲುವು ಸಾಧಿಸಿತು. ವಿಜೇತ ತಂಡಗಳಿಗೆ ಬಿಡಿಕೆ ಟ್ರಸ್ಟಿ ಬಾಬಾ ಭೂಸದ ಟ್ರೋಫಿ ಪ್ರದಾನ ಮಾಡಿದರು. ಸಂಘಟಕರಾದ ನಿಖಿಲ್ ಭೂಸದ ಹಾಗೂ ಪವನ ಕುಮಾರ ಗಂಗಾವತಿ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.