| ಜಯದ ಓಟ ಮುಂದುವರಿಸುವತ್ತ ಚಿತ್ತ ಬೆಸೆಟೆರ್, ಸೇಂಟ್ ಕಿಟ್ಸ್ : ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ಎದುರಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಜಯದ ಓಟವನ್ನು ಮುಂದುವರಿಸುವ ಅತ್ಮವಿಶ್ವಾಸದೊಂದಿಗೆ ಸೋಮವಾರ ಕಣಕ್ಕಿಳಿಯಲಿದೆ. ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿ ಗೆದ್ದ ನಂತರ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಜಯಿಸಿ 1–0 ಮುನ್ನಡೆ ಸಾಧಿಸಿತು.ಟ್ರಿನಿಡಾಡ್‌ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಭಾರತ ತಂಡವು ತನ್ನ ಮೂವರು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ, ಆರ್. ಅಶ್ವಿನ್ ಮತ್ತು ರವಿ ಬಿಷ್ಣೊಯಿ ಅವರನ್ನು ಕಣಕ್ಕಿಳಿಸಿತ್ತು. ಅಶ್ವಿನ್ ಮತ್ತು ಬಿಷ್ಣೋಯಿ ತಲಾ ಎರಡು ಹಾಗೂ ಜಡೇಜ ಒಂದು ವಿಕೆಟ್ ಪಡೆದು ತಂಡದ ಜಯದ ಹಾದಿ ಸುಗಮಗೊಳಿಸಿದ್ದರು.ಬ್ಯಾಟಿಂಗ್‌ನಲ್ಲಿಯೂ ರೋಹಿತ್ ಶರ್ಮಾ ಅರ್ಧಶತಕ ಮತ್ತು ಕೊನೆಯ ಹಂತದ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ ಬೀಸಾಟ ರಂಗೇರಿತ್ತು. ಇದರಿಂದಾಗಿ ಉಳಿದ ಬ್ಯಾಟರ್‌ಗಳ ವೈಫಲ್ಯವು ತಂಡದಕ್ಕೆ ಮೇಲೆ ಕೆಟ್ಟ ಪರಿಣಾಮ ಬೀರಲಿಲ್ಲ. ಹೋರಾಟದ ಮೊತ್ತಗಳಿಸಿ ಗುರಿ ನೀಡಲು ಸಾಧ್ಯವಾಯಿತು. ಆದರೆ ಸೂರ್ಯಕುಮಾರ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಅವರು ತಮ್ಮ ಲಯಕ್ಕೆ ಮರಳಿದರೆ ಕೆಳಕ್ರಮಾಂಕದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆತಿಥೇಯ ತಂಡದಲ್ಲಿರುವ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್‌ ಎರಡೂ ವಿಭಾಗಗಳಲ್ಲಿ ಲಯಕ್ಕೆ ಮರಳಿದರೆ ಭಾರತಕ್ಕೆ ಸವಾಲೊಡ್ಡಬಹುದು. ಬ್ಯಾಟಿಂಗ್‌ನಲ್ಲಿಯೂ ತಮ್ಮ ನೈಜ ಆಟಕ್ಕೆ ಮರಳುವ ಸವಾಲನ್ನು ವಿಂಡೀಸ್ ಪಡೆ ಎದುರಿಸುತ್ತಿದೆ. ಪಂದ್ಯ ಆರಂಭ: ರಾತ್ರಿ 8 ನೇರಪ್ರಸಾರ: ಡಿಡಿ ಸ್ಪೋರ್ಟ್ಸ್ ಮತ್ತು ಫ್ಯಾನ್‌ಕೋಡ್‌ ತಂಡಗಳು ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಇಶಾನ್ ಕಿಶನ್, ದಿನೇಶ್ ಕಾರ್ತಿಕ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಆರ್. ಅಶ್ವಿನ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್. ವೆಸ್ಟ್ ಇಂಡೀಸ್: ನಿಕೊಲಸ್ ಪೂರನ್ (ನಾಯಕ), ರೋವ್ಮನ್ ಪೊವೆಲ್, ಶಾಮ್ರಾ ಬ್ರೂಕ್ಸ್, ಡಾಮ್ನಿಕ್ ಡ್ರೇಕ್ಸ್, ಶಿಮ್ರನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೇಲ್ ಹುಸೇನ್, ಅಲ್ಜರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಒಬೆದ್ ಮೆಕಾಯ್, ಕೀಮೊ ಪಾಲ್, ರೊಮೆರಿಯೊ ಶೇಫರ್ಡ್, ಒಡಿಯನ್ ಸ್ಮಿತ್, ಡೆವೊನ್ ಥಾಮಸ್, ಹೇಡನ್ ವಾಲ್ಶ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.