ವೆಸ್ಟ್ ಇಂಡೀಸ್ ಎದುರು ಗೆದ್ದ ಭಾರತ: ಸೂರ್ಯ ಪ್ರತಾಪಕ್ಕೆ ಒಲಿದ ಜಯ ಬೆಸೆಟೆರ್, ಸೆಂಟ್ ಕಿಟ್ಸ್‌:ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ ಪರಾಕ್ರಮದ ಮುಂದೆ ವೆಸ್ಟ್ ಇಂಡೀಸ್ ಬೌಲರ್‌ಗಳ ಆಟ ನಡೆಯಲಿಲ್ಲ. ಇದರಿಂದಾಗಿ ಭಾರತ ತಂಡವು ಮಂಗಳವಾರ ತಡರಾತ್ರಿ ಮುಗಿದ ಟಿ20 ಪಂದ್ಯದಲ್ಲಿ ವಿಂಡೀಸ್ ಎದುರು 7 ವಿಕೆಟ್‌ಗಳಿಂದ ಜಯಿಸಿತು. ಐದು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಗಳಿಸಿತು. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೈಲ್ ಮೇಯರ್ಸ್ (73; 50ಎಸೆತ) ಅರ್ಧಶತಕದ ಬಲದಿಂದ ವಿಂಡೀಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 164 ರನ್‌ ಗಳಿಸಿತು. ಭಾರತದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಎರಡು, ಹಾರ್ದಿಕ್ ಪಾಂಡ್ಯ ಹಾಗೂ ಆರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಗಳಿಸಿ, ವಿಂಡೀಸ್ ದೊಡ್ಡ ಮೊತ್ತ ಗಳಿಸದಂತೆ ನೋಡಿಕೊಂಡರು. ಗುರಿ ಬೆನ್ನಟ್ಟಿದ ಭಾರತ ತಂಡವು 19 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 165 ರನ್‌ ಗಳಿಸಿತು. ಭಾರತಕ್ಕೆ ಇನಿಂಗ್ಸ್‌ನ ಆರಂಭದಲ್ಲಿಯೇ ಆಘಾತ ಎದುರಾಯಿತು. 11 ರನ್‌ ಗಳಿಸಿದ್ದ ರೋಹಿತ್ ಗಾಯಗೊಂಡು ಪೆವಿಲಿಯನ್‌ಗೆ ಮರಳಿದರು. ಆದರೆ ಇದರಿಂದ ತಂಡಕ್ಕೆ ದೊಡ್ಡ ಹಾನಿಯಾಗುವುದನ್ನು ತಡೆಯುವಲ್ಲಿ ‘ಮುಂಬೈ ಜೋಡಿ’ ಸೂರ್ಯಕುಮಾರ್ ಯಾದವ್ (76; 44ಎಸೆತ, 4X8, 6X4) ಮತ್ತು ಶ್ರೇಯಸ್ ಅಯ್ಯರ್ (24; 27ಎ) ಯಶಸ್ವಿಯಾದರು. ಇವರ ಜೊತೆಯಾಟದಲ್ಲಿ 105 ರನ್‌ ಸೇರಿದವು. 12ನೇ ಓವರ್‌ನಲ್ಲಿ ಶ್ರೇಯಸ್ ವಿಕೆಟ್ ಗಳಿಸಿದ ಡಾಮ್ನಿಕ್ ಡ್ರೇಕ್ಸ್‌ ಜೊತೆಯಾಟವನ್ನು ಮುರಿದರು.15ನೇ ಓವರ್‌ನಲ್ಲಿ ಸೂರ್ಯ ಕೂಡ ನಿರ್ಗಮಿಸಿದರು. ಈ ಹೊತ್ತಿನಲ್ಲಿ ತಂಡಕ್ಕೆ ಆಸರೆಯಾದ ರಿಷಭ್ (ಔಟಾಗದೆ 33; 26ಎ) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 5ಕ್ಕೆ164, ಭಾರತ: 19 ಓವರ್‌ಗಳಲ್ಲಿ 3ಕ್ಕೆ165 (ಸೂರ್ಯಕುಮಾರ್ ಯಾದವ್ 76, ಶ್ರೇಯಸ್ ಅಯ್ಯರ್ 24, ರಿಷಭ್ ಪಂತ್ ಔಟಾಗದೆ 33, ದೀಪಕ್ ಹೂಡಾ ಔಟಾಗದೆ 10, ಡಾಮ್ನಿಕ್ ಡ್ರೇಕ್ಸ್ 33ಕ್ಕೆ1) ಫಲಿತಾಂಶ: ಭಾರತಕ್ಕೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 2–1 ಮುನ್ನಡೆ. ಮುಂದಿನ ಪಂದ್ಯ: ಆ.6, ಫ್ಲಾರಿಡಾದಲ್ಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.