ದೇವಧರ್ ಟ್ರೋಫಿ: ಮಯಂಕ್ ಬಳಗದ ಗೆಲುವಿನ ಓಟ ಪುದುಚೇರಿ : ನಾಯಕ ಮಯಂಕ್ ಅಗರವಾಲ್ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕಗಳ ಬಲದಿಂದ ದಕ್ಷಿಣ ವಲಯ ತಂಡವು ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪೂರ್ವ ವಲಯ ತಂಡವನ್ನು 229 ರನ್‌ಗಳಿಗೆ ಕಟ್ಟಿಹಾಕುವಲ್ಲಿ ದಕ್ಷಿಣ ವಲಯ ಯಶಸ್ವಿಯಾಯಿತು. ತಂಡದಲ್ಲಿರುವ ಕರ್ನಾಟಕದ ಮಧ್ಯಮವೇಗಿಗಳಾದ ವಿ. ಕೌಶಿಕ್ (37ಕ್ಕೆ3) ಮತ್ತು ವಿದ್ವತ್ ಕಾವೇರಪ್ಪ (40ಕ್ಕೆ2) ಪೂರ್ವ ವಲಯಕ್ಕೆ ಹೊಡೆತ ನೀಡಿದರು. ಸಾಯಿ ಕಿಶೋರ್ ಕೂಡ ಮೂರು ವಿಕೆಟ್ ಉರುಳಿಸಿದರು. ದಕ್ಷಿಣ ತಂಡವು ಮಯಂಕ್ (84; 88ಎ, 4X6, 6X1) ಮತ್ತು ಸಾಯಿ ಸುದರ್ಶನ್ (53; 67ಎ, 4X4, 6X1) ಅವರ ಅಮೋಘ ಅರ್ಧಶತಕಗಳ ಬಲದಿಂದ 44.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 230 ರನ್‌ ಗಳಿಸಿತು. ಇದರೊಂದಿಗೆ ಪ್ರಶಸ್ತಿ ಸುತ್ತಿನತ್ತ ದಾಪುಗಾಲಿಟ್ಟಿತು. ರೌಂಡ್ ರಾಬಿನ್ ಲೀಗ್ ಸುತ್ತಿನಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ. ತಂಡವು ಒಟ್ಟು 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪೂರ್ವ ತಂಡವು 12 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ಪಶ್ಚಿಮ ತಂಡವು ಮೂರು ಪಂದ್ಯಗಳಿಂದ ಎಂಟು ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಸಂಕ್ಷಿಪ್ತ ಸ್ಕೋರು: ಪೂರ್ವ ವಲಯ: 45 ಓವರ್‌ಗಳಲ್ಲಿ 229 (ವಿರಾಟ್ ಸಿಂಗ್ 49, ಶುಭ್ರಾಂಶು ಸೇನಾಪತಿ 44, ಆಕಾಶ್ ದೀಪ್ 44, ಮುಕ್ತಾರ್ ಹುಸೇನ್ 33, ವಿದ್ವತ್ ಕಾವೇರಪ್ಪ 40ಕ್ಕೆ2, ವಿ. ಕೌಶಿಕ್ 37ಕ್ಕೆ3, ಸಾಯಿಕಿಶೋರ್ 45ಕ್ಕೆ3, ವೈಶಾಖ ವಿಜಯಕುಮಾರ್ 62ಕ್ಕೆ1, ವಾಷಿಂಗ್ಟನ್ ಸುಂದರ್ 41ಕ್ಕೆ1) ದಕ್ಷಿಣ ವಲಯ:44.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 230 (ಮಯಂಕ್ ಅಗರವಾಲ್ 84, ಸಾಯಿ ಸುದರ್ಶನ್ 53, ಎನ್. ಜಗದೀಶನ್ 32, ರೋಹಿತ್ ರಾಯುಡು ಔಟಾಗದೆ 24, ಅವಿನೊವ್ ಚೌಧರಿ 58ಕ್ಕೆ2) ಫಲಿತಾಂಶ: ದಕ್ಷಿಣ ವಲಯಕ್ಕೆ 5 ವಿಕೆಟ್‌ಗಳ ಜಯ. ಈಶಾನ್ಯ ವಲಯ: 49 ಓವರ್‌ಗಳಲ್ಲಿ 164 (ಆಶಿಶ್ ಥಾಪಾ 31, ಎಲ್. ಕಿಶಾಂಗ್‌ಬಮ್ 24, ಕಂಶ್ ಯಾಂಗ್‌ಫೋ 35, ರೆಕ್ಸ್ ಸಿಂಗ್ 27, ಸಾರಾಂಶ್ ಜೈನ್ 39ಕ್ಕೆ2, ಸರವಟೆ 19ಕ್ಕೆ3, ಯಶ್ ಕೊಠಾರಿ 4ಕ್ಕೆ2). ಕೇಂದ್ರ ವಲಯ: 33 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 165 (ಶಿವಂ ಚೌಧರಿ ಔಟಾಗದೆ 85, ಯಶ್ ದುಬೆ 72) ಫಲಿತಾಂಶ: ಕೇಂದ್ರ ವಲಯಕ್ಕೆ 8 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.