ಮಹಾರಾಜ ಟ್ರೋಫಿ ಕ್ರಿಕೆಟ್: ಮಯಂಕ್‌ ಅಗರವಾಲ್‌ ಶತಕ ಬೆಂಗಳೂರು: ನಾಯಕ ಮಯಂಕ್‌ ಅಗರವಾಲ್ (105) ಅವರ ಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ, ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬ್ಲಾಸ್ಟರ್ಸ್‌, 10 ರನ್‌ಗಳಿಂದ ಮೈಸೂರು ವಾರಿಯರ್ಸ್‌ ತಂಡವನ್ನು ಮಣಿಸಿತು. ಸತತ ಎಂಟು ಪಂದ್ಯಗಳನ್ನು ಸೋತಿದ್ದ ಮಯಂಕ್‌ ಬಳಗ ಕೊನೆಗೂ ಗೆಲುವಿನ ಸಿಹಿಯುಂಡಿತು. ಮೊದಲು ಬ್ಯಾಟ್‌ ಮಾಡಿದ ಬ್ಲಾಸ್ಟರ್ಸ್, ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 212 ರನ್‌ ಗಳಿಸಿತು. ವಾರಿಯರ್ಸ್‌ ತಂಡ 8 ವಿಕೆಟ್‌ಗಳಿಗೆ 202 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸವಾಲಿನ ಗುರಿ ಬೆನ್ನಟ್ಟಿದ ವಾರಿಯರ್ಸ್ ತಂಡಕ್ಕೆ ಎಸ್‌.ಯು.ಕಾರ್ತಿಕ್‌ (70 ರನ್; 30 ಎ,, 4X6, 6X6) ಸ್ಫೋಟಕ ಆರಂಭ ನೀಡಿದರು. ಅವರು ಆರ್‌.ಸಮರ್ಥ್‌ ಜೊತೆ ಮೊದಲ ವಿಕೆಟ್‌ಗೆ 60 ರನ್‌ ಹಾಗೂ ನಾಯಕ ಕರುಣ್‌ ನಾಯರ್‌ ಜೊತೆ ಎರಡನೇ ವಿಕೆಟ್‌ಗೆ 70 ರನ್‌ ಸೇರಿಸಿದರು. 12ನೇ ಓವರ್‌ನಲ್ಲಿ ಎರಡನೇ ವಿಕೆಟ್‌ ರೂಪದಲ್ಲಿ ಕಾರ್ತಿಕ್‌ ಔಟಾಗುವಾಗ ತಂಡ 130 ರನ್‌ ಕಲೆಹಾಕಿತ್ತು. ಆ ಬಳಿಕ ಮೊಹ್ಸಿನ್ ಖಾನ್‌ (35ಕ್ಕೆ 4) ಮತ್ತು ಸರ್ಫ್‌ರಾಜ್‌ ಅಶ್ರಫ್‌ (23ಕ್ಕೆ 2) ಅವರು ಬಿಗುವಾದ ದಾಳಿ ನಡೆಸಿ ವಾರಿಯರ್ಸ್‌ ಬ್ಯಾಟರ್‌ಗಳನ್ನು ನಿಯಂತ್ರಿಸಿದರು. ಮಯಂಕ್‌ ಮಿಂಚು: ಬೆಂಗಳೂರು ತಂಡ, ಅರಂಭಿಕ ಬ್ಯಾಟರ್‌ ಇ.ಜೆ.ಜಸ್ಪೆರ್‌ (1) ಅವರನ್ನು ಬೇಗನೇ ಕಳೆದುಕೊಂಡಿತು. ಮಯಂಕ್‌ ಅವರು ಡಿ.ನಿಶ್ಚಲ್‌ ಜೊತೆ ಎರಡನೇ ವಿಕೆಟ್‌ಗೆ 97 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು. 57 ಎಸೆತಗಳನ್ನು ಎದುರಿಸಿದ ಮಯಂಕ್‌ 9 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಕೊನೆಯಲ್ಲಿ ಸೂರಜ್‌ ಅಹುಜಾ (ಔಟಾಗದೆ 35; 10 ಎ., 4X1, 6X4) ರಟ್ಟೆಯರಳಿಸಿದ ಕಾರಣ ತಂಡದ ಮೊತ್ತ 200ರ ಗಡಿ ದಾಟಿತು. ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಬ್ಲಾಸ್ಟರ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 212 (ಮಯಂಕ್‌ ಅಗರವಾಲ್‌ 105, ಡಿ.ನಿಶ್ಚಲ್‌ 29, ಶುಭಾಂಗ್‌ ಹೆಗ್ಡೆ 24, ಸೂರಜ್‌ ಅಹುಜಾ ಔಟಾಗದೆ 35, ಜೆ.ಸುಚಿತ್‌ 34ಕ್ಕೆ 2) ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 202 (ಎಸ್‌.ಯು.ಕಾರ್ತಿಕ್ 70, ಆರ್‌.ಸಮರ್ಥ್‌ 35, ಕರುಣ್‌ ನಾಯರ್‌ 32, ಮೊಹ್ಸಿನ್‌ ಖಾನ್‌ 35ಕ್ಕೆ 4, ಸರ್ಫ್‌ರಾಜ್‌ ಅಶ್ರಫ್‌ 23ಕ್ಕೆ 2) ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್‌ಗೆ 10 ರನ್‌ ಗೆಲುವು ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 130 (ಶ್ರೇಯಸ್‌ ಗೋಪಾಲ್‌ 31, ಕ್ರಾಂತಿ ಕುಮಾರ್ 34, ಕೆ.ಸಿ.ಕಾರ್ಯಪ್ಪ 17ಕ್ಕೆ 2, ಮನ್ವಂತ್‌ ಕುಮಾರ್‌ 20ಕ್ಕೆ 2) ಹುಬ್ಬಳ್ಳಿ ಟೈಗರ್ಸ್ 18.4 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 131 (ಕೆ.ಶ್ರೀಜಿತ್‌ 50, ಪ್ರವೀಣ್‌ ದುಬೆ 18, ಮನ್ವಂತ್‌ ಕುಮಾರ್‌ 27, ಶ್ರೇಯಸ್‌ ಗೋಪಾಲ್‌ 30ಕ್ಕೆ 4, ವಿ.ಕೌಶಿಕ್‌ 15ಕ್ಕೆ 1) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 3 ವಿಕೆಟ್‌ ಜಯ ನಾಳೆಯ ಪಂದ್ಯಗಳು ಹುಬ್ಬಳ್ಳಿ ಟೈಗರ್ಸ್– ಮಂಗಳೂರು ಡ್ರಾಗನ್ಸ್ (ಮಧ್ಯಾಹ್ನ 1) ಗುಲ್ಬರ್ಗ ಮಿಸ್ಟಿಕ್ಸ್– ಮೈಸೂರು ವಾರಿಯರ್ಸ್ (ಸಂಜೆ 5.30) ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ಕನ್ನಡ, ಫ್ಯಾನ್‌ಕೋಡ್‌ ಆ್ಯಪ್ ಹುಬ್ಬಳ್ಳಿ ಟೈಗರ್ಸ್‌ಗೆ ಜಯ ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 3 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್‌ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ಲಯನ್ಸ್‌ ತಂಡ ಕೆ.ಸಿ.ಕಾರ್ಯಪ್ಪ ಮತ್ತು ಮನ್ವಂತ್‌ ಕುಮಾರ್‌ ಅವರ ಶಿಸ್ತಿನ ದಾಳಿಯ ಮುಂದೆ ಪರದಾಟ ನಡೆಸಿ 130 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಹುಬ್ಬಳ್ಳಿ ತಂಡ ಕೆ.ಶ್ರೀಜಿತ್‌ (50) ಅವರ ಅರ್ಧಶತಕದ ನೆರವಿನಿಂದ ಗೆಲುವು ಸಾಧಿಸಿತು. ಈಗಾಗಲೇ ನಾಕೌಟ್‌ ಹಂತ ಪ್ರವೇಶಿಸಿರುವ ಹುಬ್ಬಳಿ ತಂಡ 14 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.